ADVERTISEMENT

‘ಜಂಟಿ ಪ್ರತಿರೋಧ ನಾಯಕತ್ವ’ದ ಕರೆಯಂತೆ ಕಾಶ್ಮೀರ ಕಣಿವೆಯ ವಿವಿಧೆಡೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 13:34 IST
Last Updated 5 ಮಾರ್ಚ್ 2018, 13:34 IST
ಸಾಂದರ್ಭಿಕಾ ಚಿತ್ರ
ಸಾಂದರ್ಭಿಕಾ ಚಿತ್ರ   

ಶ್ರೀನಗರ: ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಪಹ್ನೂ ಗ್ರಾಮದಲ್ಲಿ ಭಾನುವಾರ ಸಂಜೆ ಭದ್ರತಾ ಪಡೆಗಳಿಂದ ಒಬ್ಬ ಉಗ್ರಗಾಮಿ ಮತ್ತು ಮೂವರು ‘ನಾಗರಿಕರ’ ಹತ್ಯೆಯನ್ನು ಖಂಡಿಸಿ ಪ್ರತ್ಯೇಕತಾವಾದಿಗಳ ವಿವಿಧ ಬಣಗಳ ಮುಖಂಡರನ್ನು ಒಳಗೊಂಡ ‘ಜಂಟಿ ಪ್ರತಿರೋಧ ನಾಯಕತ್ವ’ದ ಕರೆಯಂತೆ ಕಾಶ್ಮೀರ ಕಣಿವೆಯ ವಿವಿಧೆಡೆ ಸೋಮವಾರ ಬೆಳಿಗ್ಗೆಯಿಂದ ಪ್ರತಿಭಟನೆ ನಡೆಯಿತು.

ಶ್ರೀನಗರದ 7 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮತ್ತು ಕಾಶ್ಮೀರ ಕಣಿವೆಯ ಕೆಲವೆಡೆ ಜನರ ಚಲನವಲನ ಮೇಲೆ ಕರ್ಫ್ಯೂ ಜಾರಿಯಲ್ಲಿ ಇರುವಾಗ ಇರುವಂತಹ ನಿರ್ಬಂಧಗಳನ್ನು ಜಾರಿಗೊಳಿಸಲಾಯಿತ್ತು. ಶಾಲೆಗಳನ್ನು ಮುಚ್ಚಲಾಗಿತ್ತು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

ಮುಂಜಾಗ್ರತಾ ಕ್ರಮವಾಗಿ ಕಾಶ್ಮೀರ ಕಣಿವೆಯಲ್ಲಿ ಶಾಲೆಗಳನ್ನು ಬುಧವಾರದವರೆಗೆ ಮುಚ್ಚಲಾಗಿದೆ. ಕಾಶ್ಮೀರ ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ತರಗತಿಗಳು ಇರುವುದಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬಂಡಿಪೊರ, ಬಡ್‌ಗಾಂವ್್, ಅನಂತನಾಗ್, ತ್ರಾಲ್, ಅವಂತಿಪೊರ, ಪುಲ್ವಾಮಾ ಮೊದಲಾದ ಸ್ಥಳಗಳಲ್ಲಿ ನಾಗರಿಕರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಬೀದಿಗಿಳಿದು ಭದ್ರತಾ ಪಡೆಗಳ ನಡುವೆ ಘರ್ಷಣೆ ನಡೆಸಿದ್ದಾರೆ.

ADVERTISEMENT

ಜಮ್ಮು ಕಾಶ್ಮೀರ ವಿಮೋಚನಾ ರಂಗದ ಮುಖ್ಯಸ್ಥ ಯಾಸಿನ್ ಮಲ್ಲಿಕ್ ಅವರನ್ನು ಪೊಲೀಸರು ಶ್ರೀನಗರದಲ್ಲಿ ಬಂಧಿಸಿದ್ದಾರೆ. ಅನಂತನಾಗ್‌ನಲ್ಲಿ ಘರ್ಷಣೆಗಿಳಿದ ಅನೇಕ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪಹ್ನೂ ಗ್ರಾಮದಲ್ಲಿ ಸೇನೆಯ ರಾಷ್ಟ್ರೀಯ ರೈಫಲ್‌ನ ಯೋಧರು ತಮ್ಮ ಸಂಚಾರಿ ತಪಾಸಣಾ ವಾಹನದ ಮೇಲೆ ಉಗ್ರಗಾಮಿಗಳು ಗುಂಡು ಹಾರಿಸಿದ್ದಕ್ಕೆ ಪ್ರತಿಯಾಗಿ ಗುಂಡು ಹಾರಿಸಿದಾಗ ಒಬ್ಬ ಉಗ್ರಗಾಮಿ ಮತ್ತು ಇತರ ಮೂವರು ಸತ್ತಿದ್ದರು. ಈ ಮೂವರು ಉಗ್ರಗಾಮಿ ಸಂಘಟನೆಯ ಬಾಹ್ಯ ಕಾರ್ಯಕರ್ತರು ಎಂದು ಸೇನೆ ಹೇಳಿದೆ. ಆದರೆ ಈ ಮೂವರು ನಾಗರಿಕರು ಎಂಬುದು ಜನರ ಮತ್ತು ಪ್ರತ್ಯೇಕತಾವಾದಿಗಳ ವಾದ.

ಉಗ್ರಗಾಮಿಗಳು ಎಂಬ ನೆಪದಲ್ಲಿ ನಾಗರಿಕರ ಹತ್ಯೆ ಎಂದಿಗೂ ಸಮರ್ಥನೀಯವಲ್ಲ ಎಂದು ನ್ಯಾಷನಲ್ ಕಾನ್ಫರೆನ್‌್್ಸ ಪಕ್ಷ ಮತ್ತು ಶೋಪಿಯಾನ್ ಶಾಸಕ, ಪೀಪಲ್‌್ಸ ಡೆಮಾಕ್ರೆಟಿಕ್ ಪಾರ್ಟಿಯ ಮೊಹಮ್ಮದ್ ಯೂಸುಫ್ ಭಟ್ ಪ್ರತ್ಯೇಕವಾಗಿ ‘ಟ್ವೀಟ್’ ಮಾಡಿದ್ದಾರೆ. ಘಟನೆ ಬಗ್ಗೆ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ತಂಬ ಶೋಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.