ನವದೆಹಲಿ (ಪಿಟಿಐ): ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಚಂಚಲಗುಡ ಜೈಲಿನಲ್ಲಿರುವ ವೈಎಸ್ಆರ್ ಕಾಂಗ್ರೆಸ್ ಮುಖಂಡ ಮತ್ತು ಸಂಸದ ವೈ.ಎಸ್. ಜಗನ್ ಮೋಹನ್ ರೆಡ್ಡಿಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ. ಇದರಿಂದಾಗಿ ಅವರು ಮತ್ತಷ್ಟು ಕಾಲ ಜೈಲಿನಲ್ಲೇ ಕಳೆಯಬೇಕಾಗುತ್ತದೆ.
ಅಕ್ರಮ ಆಸ್ತಿ ಮತ್ತು ಇತರ ಏಳು ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ಪೂರ್ಣಗೊಳಿಸಿದ ಬಳಿಕ ಜಗನ್ ಜಾಮೀನಿಗೆ ಅರ್ಜಿಸಲ್ಲಿಸಬಹುದು ಎಂದು ನ್ಯಾ.ಅಫ್ತಾಬ್ ಆಲಂ ಮತ್ತು ರಂಜನಾ ಪ್ರಕಾಶ್ ದೇಸಾಯಿ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ.
2013ರ ಮಾರ್ಚ್ 31ಕ್ಕೆ ತನಿಖೆಯನ್ನು ಪೂರ್ಣಗೊಳಿಸುವುದಾಗಿ ಸಿಬಿಐ ಕೋರ್ಟ್ಗೆ ತಿಳಿಸಿತು. ನಂತರ ಅದಕ್ಕೂ ಮುನ್ನ ತನಿಖೆ ಮುಗಿಸಲು ಪ್ರಯತ್ನಿಸುವುದಾಗಿ ಹೇಳಿತು.
ಜಗನ್ ವಿರುದ್ಧ ದಾಖಲಾಗಿರುವ ಏಳು ಪ್ರಕರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಹೀಗಾಗಿ ಜಾಮೀನು ನೀಡಬಾರದು ಎಂದು ಸಿಬಿಐ ಪರ ವಾದಿಸುತ್ತಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಮೋಹನ್ ಪರಾಸರನ್ ಮತ್ತು ಹಿರಿಯ ವಕೀಲ ಅಶೋಕ್ ಭಾನ್ ಕೋರ್ಟ್ಗೆ ತಿಳಿಸಿದರು.
ರೂ 3 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ಅಕ್ರಮ ಆಸ್ತಿ ಹೊಂದಿರುವುದಕ್ಕೆ ಸಂಬಂಧಿಸಿದಂತೆ ಜಗನ್ ಮತ್ತು ಅವರ ನಿಕಟವರ್ತಿಗಳ ವಿರುದ್ಧ ನಾಲ್ಕು ಆರೋಪಪಟ್ಟಿ ಸಲ್ಲಿಸಲಾಗಿದೆ.
ಇಂತಹ ಸಂದರ್ಭದಲ್ಲಿ ಜಗನ್ಗೆ ಜಾಮೀನು ನೀಡುವುದು ಸರಿಯಲ್ಲ ಎಂದು ಪರಾಸರನ್ ವಿವರಿಸಿದರು. ಜಗನ್ ಪರ ಹಿರಿಯ ವಕೀಲ ಗೋಪಾಲ್ ಸುಬ್ರಮಣಿಯನ್ ಕೋರ್ಟ್ಗೆ ಹಾಜರಾಗಿದ್ದರು. ತಮ್ಮ ಕಕ್ಷಿದಾರ 120 ದಿನಗಳಿಂದ ಜೈಲಿನಲ್ಲಿದ್ದಾರೆ. ಸಿಬಿಐ ತನಿಖೆ ಪೂರ್ಣಗೊಳ್ಳಲು ವರ್ಷಗಳೇ ಬೇಕು. ಆದ್ದರಿಂದ ಜಾಮೀನು ಮಂಜೂರು ಮಾಡುವಂತೆ ಅವರು ಕೋರ್ಟ್ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.