ADVERTISEMENT

ಜಗನ್ ವಿಚಾರಣೆ?

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ನವದೆಹಲಿ: ರಾಜ್ಯದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಸಂಬಂಧಿ ಬಿ. ವಿ. ಶ್ರೀನಿವಾಸ ರೆಡ್ಡಿ ಅವರ ಬಂಧನಕ್ಕೆ ಕಾರಣವಾದ ~ಓಬಳಾಪುರಂ ಮೈನಿಂಗ್ ಕಂಪೆನಿ~  ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ವೈಎಸ್‌ಆರ್ ಕಾಂಗ್ರೆಸ್ ನೇತಾರ, ಕಡಪಾ ಸಂಸದ ವೈ. ಎಸ್. ಜಗನ್‌ಮೋಹನ್‌ರೆಡ್ಡಿ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸುವ ಸಂಭವವಿದೆ.

ಆಂಧ್ರ ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿರುವ ಜಗನ್‌ಮೋಹನ್ ರೆಡ್ಡಿ ಸಂಪತ್ತು ಹಾಗೂ ವಿವಿಧ ಕಂಪೆನಿಗಳ ಹೂಡಿಕೆ ಕುರಿತು ಈಗಾಗಲೇ ತನಿಖೆ ಆರಂಭಿಸಿರುವ ಸಿಬಿಐ, ವೈಎಸ್‌ಆರ್ ಕುಟುಂಬದ ಆತ್ಮೀಯರಾದ ಬಳ್ಳಾರಿ ರೆಡ್ಡಿ ಸಹೋದರರ ಒಡೆತನದ ಒಎಂಸಿ ಗಣಿ ಕಂಪೆನಿಯ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ಕೈಗೊಂಡಿದೆ.

ಬಂಧಿತ ಜನಾರ್ದನರೆಡ್ಡಿ ವ್ಯವಹಾರದಲ್ಲಿ ಜಗನ್ ಪಾತ್ರವಿದೆಯೇ ಅಥವಾ ಜಗನ್ ವ್ಯವಹಾರದಲ್ಲಿ ರೆಡ್ಡಿ ಪಾಲಿದೆಯೇ ಎಂಬ ಕುರಿತು ಸಿಬಿಐ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇವರಿಬ್ಬರ ನಡುವೆ ವ್ಯಾವಹಾರಿಕ ಸಂಬಂಧ ಕಂಡುಬಂದರೆ ಜಗನ್ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಸಿಬಿಐ ಮೂಲಗಳು ಸ್ಪಷ್ಟಪಡಿಸಿವೆ.

ರೆಡ್ಡಿ ಮತ್ತು ಜಗನ್ ಅವರದ್ದು ಪ್ರತ್ಯೇಕ ಪ್ರಕರಣ. ಆದರೆ, ನಿಕಟವಾದ ಸ್ನೇಹ ಸಂಬಂಧವಿದೆ. ಈ ಸಂಬಂಧ ವ್ಯವಹಾರದಲ್ಲೂ ಮುಂದುವರಿದಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಪರಸ್ಪರರ ವ್ಯವಹಾರದಲ್ಲಿ ಸಂಪರ್ಕ ಕಂಡು ಬಂದರೆ ಜಗನ್ ಅವರನ್ನು ವಿಚಾರಣೆ ನಡೆಸಲಾಗುವುದು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.