ನವದೆಹಲಿ (ಐಎಎನ್ಎಸ್): `ಅಣು ಸೋರಿಕೆ, ಸುನಾಮಿ ಮತ್ತು ಭೂಕಂಪದಿಂದ ತತ್ತರಿಸಿದ್ದ ತಮ್ಮ ದೇಶ ಈಗ ಮತ್ತಷ್ಟು ಸುರಕ್ಷಿತ ಮತ್ತು ಚೇತರಿಸಿಕೊಂಡಿದೆ~ ಎಂದು ಭಾರತದಲ್ಲಿನ ಜಪಾನ್ ರಾಯಭಾರಿ ಅಕಿಟಾಕ್ ಸೇಕಿ ಹೇಳಿದ್ದಾರೆ.
ಜಪಾನ್ನಲ್ಲಿ ಸಂಭವಿಸಿದ್ದ ಸುನಾಮಿ ಮತ್ತು ಭೂಕಂಪಕ್ಕೆ ಒಂದು ವರ್ಷ ಸಂದ ಬಳಿಕ ಭಾನುವಾರ ಇಲ್ಲಿ ನಡೆದ ಪ್ರಥಮ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, `ಈ ದುರಂತದಲ್ಲಿ ಸುಮಾರು 15 ಸಾವಿರ ಜನರು ಮೃತರಾಗಿದ್ದಾರೆ. ಘಟನೆ ಬಳಿಕ ಪುನ ರುಜ್ಜೀವನಗೊಂಡಿರುವ ದೇಶವನ್ನು ಕಣ್ಣಾರೆ ನೋಡಲು ಜಪಾನ್ಗೆ ಹೋಗಿ~ ಎಂದರು.
`ದುರಂತದ ಬಳಿಕ 71,124 ಜನರನ್ನು ಸ್ಥಳಾಂತರಿಸಲಾಗಿದ್ದು, ತಮ್ಮ ದೇಶ ಅತೀ ಬೇಗ ಸುಧಾರಿಸಿದೆ~ ಎಂದು ಹೇಳಿದರು. `ಜಪಾನ್ನಲ್ಲಿ ದುರಂತ ಸಂಭವಿಸಿದಾಗ ಭಾರತ ಸಹಾಯ ಹಸ್ತ ಚಾಚಿದ್ದು, ಪರಿಹಾರ ಕಾರ್ಯಕ್ಕೆ ದೇಣಿಗೆ ನೀಡಿದೆ~ ಎಂದು ಶ್ಲಾಘಿಸಿದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಶಶಿಧರ ರೆಡ್ಡಿ ಮಾತನಾಡಿ, ಜಪಾನ್ ಜನರಿಗೆ ಭಾರತೀಯರ ಬೆಂಬಲ ಇದೆ ಎಂದರು. ಇದೇ ಸಂದರ್ಭದಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.