
ಜಮ್ಮು (ಪಿಟಿಐ): ಭಾರೀ ಮಳೆಯಿಂದಾಗಿ ಜಮ್ಮು–ಕಾಶ್ಮೀರದ ರೇಸಿ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿದ್ದು, ವೈಷ್ಣೋದೇವಿ ದರ್ಶನಕ್ಕೆ ತೆರಳಿದ್ದ ಮೂವರು ಯಾತ್ರಿಗಳು ಸೇರಿದಂತೆ 4 ಮಂದಿ ಮೃತಪಟ್ಟಿದ್ದಾರೆ.
ಬೆಂಗಳೂರಿನ ಶಶಿಧರ್ ಕುಮಾರ್ (29), ಛತ್ತೀಸಗಡದ ಬಿಂದು ಸಹಾನಿ (30) ಮತ್ತು ಅವರ ಮಗ ವಿಶಾಲ್ (5) ಮತ್ತು ರೇಸಿ ಜಿಲ್ಲೆಯ ಸಾದಿಕ್ (32) ಮೃತಪಟ್ಟವರು.
ಬಾನಗಂಗಾ–ಅರ್ಧಕುಮಾರಿ ದೇವಸ್ಥಾನ ರಸ್ತೆ ಸಮೀಪ ಮಧ್ಯರಾತ್ರಿ ಭೂಮಿ ಕುಸಿದು ಯಾತ್ರಿಗಳು ಉಳಿದುಕೊಂಡಿದ್ದ ಶಿಬಿರದ ಮೇಲೆ ಬಿದ್ದಿದೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ ಎಂದು ಶ್ರೀಮಾತಾ ವೈಷ್ಣೋದೇವಿ ದೇವಸ್ಥಾನ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಜೀತ್ ಸಾಹು ಹೇಳಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಕಾಟಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೇಸಿಯ ಹೆಚ್ಚುವರಿ ಸೂಪರಿಟೆಂಡೆಂಟ್ ಸಂಜಯ್ ರಾಣಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.