ADVERTISEMENT

ಜಾಫರಿ ಪ್ರಕರಣದಲ್ಲಿ ಹೊಸ ಅರ್ಜಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 10:20 IST
Last Updated 9 ಫೆಬ್ರುವರಿ 2012, 10:20 IST

ಅಹಮದಾಬಾದ್ (ಪಿಟಿಐ): 2002ರ ಗೋಧ್ರಾ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫರಿ ಅವರ ಹತ್ಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೇಮಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಸಿದ್ಧಪಡಿಸಿರುವ ವರದಿಯ ಪ್ರತಿ ನೀಡಬೇಕೆಂದು ಇಬ್ಬರು ಸಾಮಾಜಿಕ ಕಾರ್ಯಕರ್ತರು ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಗುರುವಾರ ಎಸ್ಐಟಿಗೆ ನೋಟಿಸ್ ಜಾರಿ ಮಾಡಿದೆ.

ಎಸ್‌ಐಟಿ ಸಲ್ಲಿಸಿರುವ ವರದಿ ಪ್ರತಿಗಳನ್ನು ಬಯಸಿ ಸಾಮಾಜಿಕ ಕಾರ್ಯಕರ್ತರಾದ ತೀಸ್ತಾ ಸೆತಲ್ವಾಡ್ ಹಾಗೂ ಮುಕುಲ್ ಸಿನ್ಹಾ ಅವರು ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿರುವ ಬೆನ್ನಲ್ಲೇ ಮೆಟ್ರೋಪಾಲಿಟನ್ ಕೋರ್ಟ್‌ನ ದಂಡಾಧಿಕಾರಿ ಎಮ್.ಎಸ್.ಭಟ್  ಎಸ್‌ಐಟಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಫೆಬ್ರುವರಿ 13ಕ್ಕೆ ನಿಗದಿಪಡಿಸಿದ್ದಾರೆ.

ಎಹ್ಸಾನ್ ಜಾಫರಿ ಹತ್ಯೆ ಕುರಿತು ಎಹ್ಸಾನ್ ಪತ್ನಿ ಜಾಕಿಯಾ ಅವರು ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಎಸ್‌ಐಟಿ ಬುಧವಾರ ಮೊಹರು ಮಾಡಿದ ಲಕೊಟೆಯಲ್ಲಿ ವರದಿಯನ್ನು ಸಲ್ಲಿಸಿತ್ತು.

ಆದರೆ ವರದಿಯಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ನಿರ್ದೋಷಿ ಎಂದು ಹೇಳಲಾಗಿದೆಯೋ ಅಥವಾ ಅವರ ವಿರುದ್ದದ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆಯೋ ಎಂಬ ಅಂಶಗಳು ಅಧಿಕೃತವಾಗಿ ತಿಳಿದುಬಂದಿಲ್ಲ.

ಕೋಮು ಗಲಭೆಗೆ ಸಹಾಯ ಹಾಗೂ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಇತರೆ 57 ಜನರ ವಿರುದ್ದ ಜಾಕಿಯಾ ಜಾಫರಿ ದೂರು ನೀಡಿದ್ದರು.

2002ರಲ್ಲಿ ಎಹ್ಸಾನ್ ಜಾಫರಿ ಸೇರಿದಂತೆ 69 ಜನರನ್ನು ಗುಲ್ಬರ್ಗಾ ಹೌಸಿಂಗ್ ಸೊಸೈಟಿಯಲ್ಲಿ ನಡೆದ ಹಿಂಸಾಚಾರದಲ್ಲಿ ಹತ್ಯೆ ಮಾಡಲಾಗಿತ್ತು. ಇದೇ ವೇಳೆ ಗುಜರಾತ್‌ನಲ್ಲಿ ಕೋಮು ಗಲಭೆಗೆ 1200 ಜನ ಬಲಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT