ಗೊಡ್ಡಾ/ಜಾರ್ಖಂಡ್: ದನಗಳ ಕಳವು ಆರೋಪದಡಿ ಇಬ್ಬರು ಮುಸ್ಲಿಮ್ ವ್ಯಕ್ತಿಗಳನ್ನು ಉದ್ರಿಕ್ತ ಗ್ರಾಮಸ್ಥರ ಗುಂಪು ಕೊಂದು ಹಾಕಿರುವ ಘಟನೆ ಜಾರ್ಖಂಡ್ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ನಡೆದಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ
ಮೃತರನ್ನು ಸಿರಾಬುದ್ದೀನ್ ಅನ್ಸಾರಿ (35), ಮುರ್ತಾಜ ಅನ್ಸಾರಿ (30) ಎಂದು ಗುರುತಿಸಲಾಗಿದೆ. ಇವರು ರಾಂಚಿಯಿಂದ 200 ಕಿ.ಮೀ ದೂರದಲ್ಲಿರುವ ತಲ್ಜರಿಯ ನಿವಾಸಿಗಳು.
ಈ ಬಗ್ಗೆ ಸ್ಪಷ್ಟನೆ ನೀಡಿದ ಅಖಿಲೇಶ್ ಕುಮಾರ್ ಜಾ ಅವರು, ‘ಡುಲ್ಲು ಎಂಬ ಗ್ರಾಮದಲ್ಲಿರುವ ಮುನ್ಶಿ ಮುರ್ಮು ಎಂಬುವವರ ಮನೆಯಲ್ಲಿನ ದನಗಳನ್ನು ಐದು ಮಂದಿ ಮಂಗಳವಾರ ರಾತ್ರಿ ಕದ್ದಿದ್ದರು. ಈ ವಿಷಯ ತಿಳಿದು ಬೆನ್ನಟ್ಟಿದ ಗ್ರಾಮಸ್ಥರು ಬಂಕತಿ ಗ್ರಾಮದಲ್ಲಿ ಸೆರೆಹಿಡಿದು ಹಲ್ಲೆ ಮಾಡಿದ್ದರು. ಇದರಲ್ಲಿ ಇಬ್ಬರು ಮೃತಪಟ್ಟಿದ್ದು, ಮೂವರು ಪರಾರಿಯಾಗಿದ್ದಾರೆ. ಈ ಸಂಬಂಧ ಮುರ್ಮು ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ’ ಎಂದು ತಿಳಿಸಿದ್ದಾರೆ.
‘ಒಟ್ಟು ಐದು ಮಂದಿ13 ದನಗಳನ್ನು ಕದ್ದೊಯ್ದಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದರು.ಈಗಾಗಲೇ ದನಗಳು ಪತ್ತೆಯಾಗಿವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ’ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ವರಿಷ್ಠಾಧಿಕಾರಿ ರಾಜೀವ್ ರಂಜನ್ ಸಿಂಗ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.