ನವದೆಹಲಿ (ಪಿಟಿಐ): ಜಾರ್ಖಂಡ್ ರಾಜ್ಯಸಭೆ ಚುನಾವಣೆಯನ್ನು ರದ್ದುಪಡಿಸಿರುವ ಚುನಾವಣೆ ಆಯೋಗದ ತೀರ್ಮಾನ ಐತಿಹಾಸಿಕವಾದುದು ಎಂದು ಪ್ರಶಂಶಿರುವ ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರು, ಹಣದ ಚೀಲ ಹಿಡಿದುಕೊಂಡು ಚುನಾವಣೆ ಕಣಕ್ಕಿಳಿಯುವ ಪ್ರವೃತ್ತಿಗೆ ಈ ತೀರ್ಮಾನ ಕಡಿವಾಣ ಹಾಕಲಿದೆ ಎಂದು ತಿಳಿಸಿದ್ದಾರೆ.
ರಾಜ್ಯಸಭಾ ಚುನಾವಣೆಯು ಮುಕ್ತವಾಗಿ ನಡೆಯಬೇಕು ಎಂಬ ಉದ್ದೇಶದಿಂದ 2003ರಲ್ಲಿ ಎನ್ಡಿಎ ಸರ್ಕಾರ ಜನಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ತಂದಿದೆ. ಈಗ ಈ ವಿಚಾರದಲ್ಲಿ ಇನ್ನೂ ಹೆಚ್ಚಿನ ಗಮನ ಅಗತ್ಯವಾಗಿದೆ ಹಾಗೂ ಚುನಾವಣೆ ಆಯೋಗದ ತೀರ್ಮಾನದಿಂದ ಹಣದ ಪ್ರಭಾವಕ್ಕೆ ಅವಕಾಶ ನೀಡಬಾರದು ಎಂಬುದು ಇನ್ನಷ್ಟು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಎಸ್. ವೈ ಖುರೇಶಿ ಮತ್ತು ಆಯೋಗದ ಕ್ರಮವನ್ನು ಅಡ್ವಾಣಿ ಅವರು ಮೆಚ್ಚಿ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ.
ಚುನಾವಣೆಯಲ್ಲಿ ಹಣದ ಪ್ರಭಾವ ಹೆಚ್ಚುವುದನ್ನು ತಡೆಯಲು ಸಾಧ್ಯವಿಲ್ಲ ಎಂಬ ಸಿನಿಕತನ ಹೋಗಬೇಕಾದರೆ ಬ್ರಿಟನ್ನಲ್ಲಿ ಜಾರಿಗೆ ತಂದಿರುವ ಚುನಾವಣಾ ಸುಧಾರಣಾ ಕ್ರಮವನ್ನು ಭಾರತದಲ್ಲೂ ತರಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಚುನಾವಣಾ ಆಯೋಗವು ಕಾಂಗ್ರೆಸ್ ಒತ್ತಡಕ್ಕೆ ಮಣಿದು ಕೆಲಸ ಮಾಡಬಾರದು ಎಂದು ಜಾರ್ಖಂಡ್ ಬಿಜೆಪಿ ಉಸ್ತುವಾರಿ ಹೊತ್ತಿರುವ ಹರೇಂದರ್ ಪ್ರತಾಪ್ ಸಿಂಗ್ ಟೀಕಿಸಿದ್ದರೂ ಅಡ್ವಾಣಿ ಅವರು ಚುನಾವಣೆ ಆಯೋಗದ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಿಂದಿನ ಬಾರಿ ಚುನಾವಣೆಯಲ್ಲಿ ಪಕ್ಷೇತರರೊಬ್ಬರು ರಾಜ್ಯಸಭೆ ಪ್ರವೇಶಿಸಲು ಹಣ ಚೆಲ್ಲಿದಾಗ ಸುಮ್ಮನಿದ್ದ ಆಯೋಗವು ಈ ಬಾರಿ ಅತಿಯಾದ ಕ್ರಿಯಾಶೀಲತೆಯನ್ನು ತೋರಿದೆ ಎಂದು ಸಿಂಗ್ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.