ADVERTISEMENT

ಜಾಲತಾಣದಲ್ಲಿ ತೇಜೋವಧೆ: ಅಮೀರ್‌ ಖಾನ್‌ ದೂರು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2014, 19:30 IST
Last Updated 9 ಮಾರ್ಚ್ 2014, 19:30 IST

ಮುಂಬೈ (ಪಿಟಿಐ): ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ­ವಾಗಿ ತಮ್ಮ ತೇಜೋವಧೆ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ಬಾಲಿವುಡ್‌ ನಟ  ಅಮೀರ್‌ ಖಾನ್‌  ಪೊಲೀಸರಿಗೆ ದೂರು ನೀಡಿದ್ದಾರೆ.

ಮುಂಬೈ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಶನಿವಾರ ಜಂಟಿ ಪೊಲೀಸ್‌ ಆಯುಕ್ತ (ಅಪರಾಧ ತಡೆ ವಿಭಾಗ) ಸದಾ­ನಂದ ಡಾಟೆ ಅವರನ್ನು ಭೇಟಿ ಮಾಡಿದ ಅಮೀರ್ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸಾಮಾಜಿಕ ಜಾಲತಾಣ­ಗಳಲ್ಲಿ ಕೆಲ ಕಿಡಿಗೇಡಿಗಳು ತಮ್ಮ ಹೆಸರಿಗೆ ಮಸಿ ಬಳಿಯುವ, ಗೌರವಕ್ಕೆ ಧಕ್ಕೆ ತರುವ ಸಂದೇಶ­ಗಳನ್ನು ಪ್ರಕಟಿ­ಸುತ್ತಿದ್ದಾರೆ. ತಾವು ನಡೆಸಿಕೊಡುತ್ತಿರುವ ‘ಸತ್ಯಮೇವ ಜಯತೆ’­ಯ ಬಗ್ಗೆಯೂ ಆಕ್ಷೇಪಾರ್ಹ ಹೇಳಿಕೆ ಪೋಸ್ಟ್‌ ಮಾಡುತ್ತಿದ್ದಾರೆ ಎಂದು ಅಮೀರ್‌ ದೂರಿದ್ದಾರೆ.

‘ ಸತ್ಯಮೇಯ ಜಯತೆ’ ಎರಡನೇ ಆವೃತ್ತಿಯಲ್ಲಿ ಮಸೀದಿ ನಿರ್ಮಿಸಲು ದೇಣಿಗೆ ಕೇಳಲಾಗುತ್ತಿದೆ. ಮುಸ್ಲಿಂ ಯುವಕರಿಗೆ ಉದ್ಯೋಗ ನೀಡುವಂತೆ  ಕೋರಲು ಈ ಕಾರ್ಯಕ್ರಮವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣ­ಗಳಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ’ ಎಂದು ಅಮೀರ್ ಸಾಮಾಜಿಕ ಜಾಲತಾಣಗಳಲ್ಲಿ ಸಮಜಾಯಿಷಿ ನೀಡಿದ್ದಾರೆ.

‘ಸತ್ಯಮೇವ ಜಯತೆ’ ಕಾರ್ಯಕ್ರಮದ ಮೂಲಕ ಸಂಗ್ರಹಿಸಲಾದ ದೇಣಿಗೆಯನ್ನು ಜಾತ್ಯತೀತ ಮತ್ತು ಮಾನವೀಯ ಕೆಲಸಗಳಿಗೆ ಮಾತ್ರ ಬಳಸಲಾಗುತ್ತದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.