ADVERTISEMENT

ಜೈಪುರ ಕಾಲು ಖ್ಯಾತಿಯ ಮೆಹ್ತಾಗೆ ಸದ್ಭಾವನಾ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2012, 19:30 IST
Last Updated 4 ಆಗಸ್ಟ್ 2012, 19:30 IST

ನವದೆಹಲಿ (ಪಿಟಿಐ): ಅಂಗವಿಕಲರಿಗೆ ಕೃತಕ ಕಾಲುಗಳನ್ನು ತಯಾರಿಸಿ ಉಚಿತವಾಗಿ ವಿತರಣೆ ಮಾಡುತ್ತಿರುವ ಜೈಪುರ ಕಾಲು ತಯಾರಿಕಾ ಸಂಸ್ಥೆಯ ಸಂಸ್ಥಾಪಕ ಮುಖ್ಯಸ್ಥ ಡಿ.ಆರ್ ಮೆಹ್ತಾ ಅವರನ್ನು ಈ ವರ್ಷದ `ರಾಷ್ಟ್ರೀಯ ಸದ್ಭಾವನ~ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಶನಿವಾರ ತಿಳಿಸಿದೆ.

 ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡುತ್ತಿದೆ. ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಇದೇ 20ರಂದು ನಡೆಯಲಿರುವ ರಾಜೀವ್ ಗಾಂಧಿ ಜನ್ಮ ದಿನಚಾರಣೆಯಂದು ರಾಷ್ಟ್ರೀಯ ಸದ್ಭಾವನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕಾಂಗ್ರೆಸ್ ಸಲಹಾ ಸಮಿತಿಯ ಕಾರ್ಯದರ್ಶಿ ಮೋತಿಲಾಲ್ ವೋರಾ ತಿಳಿಸಿದ್ದಾರೆ. 1975ರಲ್ಲಿ ಮೆಹ್ತಾ ಅವರು ಭಗವಾನ್ ಮಹಾವೀರ್ ವಿಕಲಾಂಗ ಸಹಾಯಕ ಸಮಿತಿ (ಬಿಎಂವಿಎಸ್‌ಎಸ್) ಎಂಬ ಟ್ರಸ್ಟ್ ಸ್ಥಾಪಿಸಿದರು. ಅದರ ಮುಖಾಂತರ ಅಂಗವಿಕಲರಿಗೆ ಉಚಿತವಾಗಿ ಕೃತಕ ಕಾಲುಗಳನ್ನು ನೀಡುತ್ತಿದ್ದಾರೆ. ಭಾರತ ಮಾತ್ರವಲ್ಲದೇ, ಯುದ್ಧ ಸಂತ್ರಸ್ತ ದೇಶಗಳಾದ ಕಾಂಗೋ, ಆಫ್ಘಾನಿಸ್ತಾನದಲ್ಲಿ ಕಾಲು ಕಳೆದುಕೊಂಡ ಸೈನಿಕರಿಗೂ ಕೃತಕ ಕಾಲುಗಳನ್ನು ಈ ಸಂಸ್ಥೆ ವಿತರಿಸಿದೆ.

ಸಾಮಾಜಿಕ, ಆರ್ಥಿಕ, ರಾಜಕೀಯ, ಸಂಗೀತ, ಚಲನಚಿತ್ರ  ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಈ ಹಿಂದೆ ಮದರ್ ತೆರೆಸಾ, ಬಿಸ್ಮಿಲ್ಲಾ ಖಾನ್, ಲತಾ ಮಂಗೇಷ್ಕರ್, ಸುನೀಲ್ ದತ್, ದಿಲಿಪ್ ಕುಮಾರ್  ಇತರರಿಗೆ  ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.