ನವದೆಹಲಿ(ಪಿಟಿಐ): 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ರತನ್ ಟಾಟಾ ಅವರು ಸಂಭಾವಿತರು ಎಂದು ಹೇಳಿಕೊಂಡಿದ್ದರೂ ಸಹ, ನಿಯಮಗಳಿಗೆ ವಿರುದ್ಧವಾಗಿ ಪರವಾನಗಿ ಪಡೆದಿದ್ದಾರೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ.
ಟಾಟಾ ಅವರ ಬಹಿರಂಗಪತ್ರಕ್ಕೆ ಪ್ರತಿಯಾಗಿ ನೀಡಿರುವ ಹೇಳಿಕೆಯಲ್ಲಿ ಹರಿಹಾಯ್ದಿರುವ ಅವರು, ರಾಜಕೀಯ ಉದ್ದೇಶಗಳಿಗಾಗಿ ಟಾಟಾ ಅವರು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟಾಗುವಂತೆ ವರ್ತಿಸಿದ್ದಾರೆ. ದೂರಸಂಪರ್ಕ ನಿಯಮಗಳಲ್ಲಿ ಬದಲಾಗುವಂತೆ ಪ್ರಭಾವ ಬೀರಿದ್ದಾರೆ. ಇದರಿಂದಾಗಿ ಜಿಎಸ್ಎಂ ಒಡೆತನದವರಿಗೆ ಅನುಕೂಲವಾಗಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಅಲ್ಲದೇ ನೀತಿ ನಿಯಮಗಳನ್ನು ಬದಲಾವಣೆ ಮಾಡುವಲ್ಲಿ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರದೀಪ್ ಬೈಜಾಲ್ ಅವರ ಪಾತ್ರವೂ ಇದೆ. ಅವರು ನೀತಿ ನಿರೂಪಣೆಯಲ್ಲಿ ಬದಲಾವಣೆ ಮಾಡುವ ಮೂಲಕ ಟಾಟಾ ಸಮೂಹಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ದೂರಿದ್ದಾರೆ.
ದೂರ ಸಂಪರ್ಕ ಇಲಾಖೆಯಲ್ಲಿನ ನೀತಿ ಬದಲಾವಣೆಗೆ ಪ್ರಭಾವ ಬೀರಿದ ನೀರಾ ರಾಡಿಯಾ ಅವರನ್ನು ಚಂದ್ರಶೇಖರ್ ಕಟುವಾಗಿ ಟೀಕಿಸಿದ್ದಾರೆ. ಇನ್ನು ಮುಂದೆ ದೂರಸಂಪರ್ಕ ಇಲಾಖೆಯಲ್ಲಿ ಇಂತಹ ಪ್ರಭಾವ ಬೀರುವ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸಬಾರದು ಎಂದೂ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.