ADVERTISEMENT

ಟಿಬೆಟ್‌ನಲ್ಲಿ ದೌರ್ಜನ್ಯ ತಡೆಗಟ್ಟಲು ಮನವಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 19:30 IST
Last Updated 23 ಅಕ್ಟೋಬರ್ 2011, 19:30 IST

ಟಿಬೆಟ್‌ನಲ್ಲಿ ದೌರ್ಜನ್ಯ ತಡೆಗಟ್ಟಲು ಮನವಿ
ಧರ್ಮಶಾಲಾ (ಐಎಎನ್‌ಎಸ್):
ಚೀನಾದಿಂದ ಟಿಬೆಟ್‌ನಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ನಿಯಂತ್ರಿಸಲು ಅಂತರ ರಾಷ್ಟ್ರೀಯ ಸಮುದಾಯ ಮಧ್ಯೆ ಪ್ರವೇಶಿಸಬೇಕು ಎಂದು ಹಿಮಾಚಲ ಪ್ರದೇಶ ಮೂಲದ ಕೇಂದ್ರೀಯ ಟಿಬೆಟನ್ ಆಡಳಿತ ವಿಭಾಗ ಒತ್ತಾಯಿಸಿದೆ.

ಸಂಸದೀಯ ನಿಯೋಗ ಭಾನುವಾರ ನವದೆಹಲಿಯಲ್ಲಿ ವಿವಿಧ ದೇಶಗಳ ರಾಜತಾಂತ್ರಿಕರನ್ನು ಭೇಟಿ ಮಾಡಿ, ಚೀನಾ ನಡೆಸುತ್ತಿರುವ ದೌರ್ಜನ್ಯ ತಡೆಗಟ್ಟಲು ಮುಂದಾಗಬೇಕು ಎಂದು ಆಗ್ರಹಿಸಿತು.

ಅಮೆರಿಕ, ಬ್ರಿಟನ್, ಫ್ರಾನ್ಸ್, ಡೆನ್ಮಾರ್ಕ್, ನಾರ್ವೆ, ಫಿನ್‌ಲ್ಯಾಂಡ್ ಸೇರಿದಂತೆ 12ಕ್ಕೂ ಹೆಚ್ಚು ದೇಶಗಳ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ನಿಯೋಗ ಭೇಟಿ ಮಾಡಿದೆ. ಇದಲ್ಲದೇ ಯೂರೋಪಿಯನ್ ಒಕ್ಕೂಟವನ್ನು ಕೂಡ ಭೇಟಿ ಮಾಡಿ ವಿವರಿಸಲಾಗಿದೆ.

ಗೋವಾ: ಮಾಧ್ಯಮ ಸಂದರ್ಶನಕ್ಕೆ ಕಾಂಗ್ರೆಸ್ ಆಕ್ಷೇಪ
ಪಣಜಿ (ಪಿಟಿಐ):
ಗೋವಾದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ತನಿಖೆಯನ್ನು ನಡೆಸಲು ಕೇಂದ್ರ ಸರ್ಕಾರವು ನೇಮಿಸಿರುವ ಸಮಿತಿಯ ಸದಸ್ಯರು ಮಾಧ್ಯಮಗಳಿಗೆ ಸಂದರ್ಶನ ನೀಡುವುದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.

ಸಮಿತಿಯ ಗೌರವಾರ್ಹತೆ ಉಳಿಸಿಕೊಳ್ಳುವುದಕ್ಕಾಗಿ ತನಿಖೆ ಪೂರ್ಣಗೊಂಡು ಅಂತಿಮ ವರದಿ ಬರುವವರೆಗೂ ಸಮಿತಿ ಸದಸ್ಯರು ಮಾಧ್ಯಮಗಳಿಂದ ದೂರ ಉಳಿಯಬೇಕು ಎಂದು ಕಾಂಗ್ರೆಸ್ ಹೇಳಿದೆ.ಈ ತನಿಖಾ ಸಮಿತಿಯ ನೇತೃತ್ವವನ್ನು ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಎಂ.ಬಿ.ಷಾ ವಹಿಸಿದ್ದಾರೆ.

ಜಾಗತಿಕ ತಾಪಮಾನ ಹೆಚ್ಚಳ: ಕರಗುತ್ತಿರುವ ಹಿಮನದಿ
ಬೀಜಿಂಗ್ (ಪಿಟಿಐ):
ಭಾರತೀಯ ಉಪಖಂಡ ಮತ್ತು ಚೀನಾದ ಹಲವು ನದಿಗಳಿಗೆ ಪ್ರಮುಖ ಆಧಾರವಾಗಿರುವ ನೈರುತ್ಯ ಚೀನಾದ ಕಿಂಗ್‌ಹೈ ಟಿಬೆಟನ್ ಪ್ರಸ್ಥಭೂಮಿಯಲ್ಲಿರುವ ಹಿಮನದಿಗಳು, ಹೆಚ್ಚುತ್ತಿರುವ ಜಾಗತಿಕ ತಾಪಮಾನದಿಂದಾಗಿ ಅತ್ಯಂತ ವೇಗವಾಗಿ ಕರಗತೊಡಗಿವೆ  ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ವಾಯವ್ಯ ಚೀನಾದ ಯಾಂಗ್ಜೆ, ಲ್ಯಾನ್‌ಕ್ಯಾಂಗ್ ನದಿ ದಂಡೆಯಲ್ಲಿರುವ ಪ್ರದೇಶದಲ್ಲಿನ ನೀರು, ಭೂಗರ್ಭ, ಹಿಮನದಿಗಳು ಮತ್ತು ಬಂಜರು ಭೂಮಿಯಲ್ಲಿ  2005ರಿಂದ ವಿಜ್ಞಾನಿಗಳು ನಡೆಸುತ್ತಿರುವ ಸಂಶೋಧನೆಯಿಂದ ಈ ವಿಷಯ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.