ತ್ರಿಪುರ: ಕಳೆದ ರಾತ್ರಿ ನಡೆದ ಟಿವಿ ಮಾಧ್ಯಮ ಪ್ರತಿನಿಧಿ ಶಂತನು ಭೌಮಿಕ್ ಹತ್ಯೆಯನ್ನು ಖಂಡಿಸಿ ಪತ್ರಕರ್ತರು ಬೃಹತ್ ಪ್ರತಿಭಟನೆ ಕೈಗೊಂಡಿದ್ದು, ಕೊಲೆ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಳೆದ ರಾತ್ರಿ ಇಂಡಿಜಿನಿಯಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (IPFT)ಮತ್ತು ತ್ರಿಪುರ ಸಿಪಿಐಎಂನ ಬುಡಕಟ್ಟು ಸಮುದಾಯ ಘಟಕ ರಾಜೇರ್ ಉಪಜಾತಿ ಗಣಮುಕ್ತಿ ಪರಿಷತ್ ಕಾರ್ಯಕರ್ತರ ನಡುವೆ ಮಂಡಾಯ್ನಲ್ಲಿ ನಡೆಯುತ್ತಿದ್ದ ಸಂಘರ್ಷ ವರದಿ ಮಾಡುತ್ತಿದ್ದಾಗ ಟಿವಿ ಮಾಧ್ಯಮ ವರದಿಗಾರ ಶಂತನು ಭೌಮಿಕ್ ಅವರನ್ನು ಕೊಲೆ ಮಾಡಲಾಗಿತ್ತು.
ಈ ಹತ್ಯೆ ಸಂಬಂಧ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರ ನಿವಾಸದ ಬಳಿ ಬೃಹತ್ ಹೋರಾಟ ಮುಂದುವರೆದಿದೆ. ಇದೇ ವೇಳೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ತ್ರಿಪುರದ ಪತ್ರಕರ್ತರ ಸಂಘ ಒತ್ತಾಯಿಸಿದೆ.
ಕಳೆದ ರಾತ್ರಿಯಿಂದ ತ್ರಿಪುರ ಸುತ್ತಮುತ್ತ ಬಿಗುವಿನ ವಾತಾವರಣ ಕಂಡುಬಂದಿದ್ದು, ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. 15ಕ್ಕೂ ಹೆಚ್ಚು ರಾಜ್ಯ ಸಾರಿಗೆ ಬಸ್ಸುಗಳಿಗೆ ಹಾನಿಯಾಗಿದೆ. ಎರಡು ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಕೂಡ ನೇಮಕ ಮಾಡಲಾಗಿದೆ.
ಕೊಲೆ ಸಂಬಂಧ ಐಪಿಎಫ್ಟಿಯ ನಾಲ್ವರು ಸದಸ್ಯರನ್ನು ಬಂಧಿಸಿರುವುದಾಗಿ ತ್ರಿಪುರ ಪೊಲೀಸರು ಹೇಳಿದ್ದಾರೆ.
ಈ ಹತ್ಯೆ ಖಂಡಿಸಿ ದೆಹಲಿಯ ಪ್ರೆಸ್ಕ್ಲಬ್ ಬಳಿ ಶುಕ್ರವಾರ ಸಂಜೆ 4 ಗಂಟೆಗೆ ಪ್ರತಿಭಟನೆ ಕೈಗೊಳ್ಳಲು ಪತ್ರಕರ್ತರು ನಿರ್ಧರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.