ಲಖನೌ: ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳೆಲ್ಲ ಒಗ್ಗೂಡಬೇಕು ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ಕರೆ ನೀಡಿರುವ ಪೋಸ್ಟರ್ಗಳು ಟ್ವಿಟರ್ನಲ್ಲಿ ಪ್ರಕಟವಾಗಿವೆ ಎಂಬ ಮಾಧ್ಯಮ ವರದಿಯನ್ನು ಮಾಯಾವತಿ ಅಲ್ಲಗಳೆದಿದ್ದಾರೆ.
‘ನಮ್ಮ ಪಕ್ಷ ಮೈಕ್ರೋ ಬ್ಲಾಗಿಂಗ್ ಖಾತೆಗಳನ್ನು ಹೊಂದಿಲ್ಲ. ಆದ್ದರಿಂದ ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ಸುಳ್ಳು. ಲಾಲು ಪ್ರಸಾದ್ ಅವರು ಆಗಸ್ಟ್ 27ಕ್ಕೆ ರ್ಯಾಲಿಗೆ ಕರೆ ನೀಡಿದ್ದಾರೆ ಎಂಬುದೂ ನಿಜವಲ್ಲ’ ಎಂದು ಅವರು ಹೇಳಿದ್ದಾರೆ.
ವರದಿ ಪ್ರಕಾರ, ಮಾಯಾವತಿ ಅವರ ಜೊತೆಗೆ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ತೇಜಸ್ವಿ ಪ್ರತಾಪ್ ಹಾಗೂ ಜೆಡಿಯು ಮುಖಂಡ ಶರದ್ ಯಾದವ್ ಅವರ ಚಿತ್ರಗಳೂ ಪೋಸ್ಟರ್ನಲ್ಲಿವೆ. ಇದಲ್ಲದೆ, ಬಿಎಸ್ಪಿ ಚಿಹ್ನೆ ಮತ್ತು ದಲಿತ ಮುಖಂಡರ ಚಿತ್ರಗಳೂ ಇವೆ.
‘ಟ್ವಿಟರ್ ಖಾತೆ ಬಿಎಸ್ಪಿಯದ್ದೇ ಎಂದು ಖಚಿತಪಟ್ಟಿದೆ. ಪಕ್ಷದ ಖಾತೆ ಆಗಿರದಿದ್ದರೆ ಪಕ್ಷ ದೂರು ದಾಖಲಿಸುತ್ತದೆಯೇ? ದೂರು ದಾಖಲಿಸದಿದ್ದರೆ ಇದು ಅಧಿಕೃತ ಖಾತೆ ಎಂದು ಘೋಷಿಸಲಿ’ ಎಂದು ಟ್ವಿಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.