ಮುಂಬೈ:ಪ್ರಶಸ್ತಿ, ಪುರಸ್ಕಾರ ಪಡೆಯದವರ ದೊಡ್ಡ ಪರಂಪರೆಯೇ ನಮ್ಮಲ್ಲಿದೆ. ಆ ಹಿರಿಯರ ಸಾಧನೆಯನ್ನು ನೆನೆಯವುದೇ ರೋಮಾಂಚನದ ವಿಷಯ. ಅಂತಹ ಜನರ ಮುಂದೆ ನಾನು ಇನ್ನೂ ಕೂಸು ಎಂದು ಖ್ಯಾತ ಸಾಹಿತಿ ಡಾ. ರಾಮಕೃಷ್ಣ ಮರಾಠೆ ಅವರು ಹೇಳಿದರು.
ಇಲ್ಲಿ ಕರ್ನಾಟಕ ಸಂಘದ 2011 ಸಾಲಿನ ವರದರಾಜ ಆದ್ಯ ಸ್ಮಾರಕ ಪ್ರಶಸ್ತಿ ಸ್ವೀಕರಿಸಿದ ಅವರು ಆದ್ಯ ಪ್ರಶಸ್ತಿಯಿಂದ ತಮಗೆ ಸಂತೋಷ ಹಾಗೂ ಸಂಕೋಚ ಆಗುತ್ತದೆ ವಿನಮ್ರವಾಗಿ ನುಡಿದರು.
ಕನ್ನಡದ ಕೈಂಕರ್ಯಕ್ಕೆ ಸಂಕಲ್ಪ ತೊಟ್ಟಿರುವ ಕನ್ನಡಿಗರನ್ನು ಕಂಡಾಗ ಸಂತೋಷವಾಗುತ್ತದೆ. ಕನ್ನಡ ಮತ್ತು ಮರಾಠಿಯ ತೌಲನಿಕ ಅಧ್ಯಯನ ಅಗತ್ಯ. ಗಡಿನಾಡಿನಲ್ಲಿ ಕನ್ನಡಿಗರು ಮತ್ತು ಮರಾಠಿಗರು ಅನ್ಯೋನ್ಯವಾಗಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿ ಮುಲುಂಡ್ನ ವಿ.ಪಿ.ಎಮ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎನ್.ಬಿ.ಎಚ್. ಕುಲಕರ್ಣಿ ಅವರು ಉಪನಗರದಲ್ಲಿ ಕನ್ನಡಿಗರು ಹಂಚಿಹೋಗಿದ್ದಾರೆ. ನಮ್ಮ ಮೊಮ್ಮಕ್ಕಳಿಗೆ ಕನ್ನಡ ಕಲಿಸುವ ಪ್ರಾಮಾಣಿಕ ಕಾಳಜಿ ಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಿ.ಡಿ. ಜೋಶಿ ಅವರು ಕರ್ನಾಟಕ ಸಂಘ ಬೆಳೆಸುವಲ್ಲಿ ವರದರಾಜ ಆದ್ಯ ಅವರ ಪರಿಶ್ರಮವನ್ನು ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.