ಮುಂಬೈ: ಬಾಂಬೆ ಹೈಕೋರ್ಟ್ನ ನ್ಯಾಯಮೂರ್ತಿಯೊಬ್ಬರು ಶುಕ್ರವಾರ ತಡರಾತ್ರಿವರೆಗೂ ನ್ಯಾಯಾಲಯದಲ್ಲಿ ಅರ್ಜಿಗಳ ವಿಲೇವಾರಿ ನಡೆಸಿದ್ದಾರೆ.
ಬಹುತೇಕ ನ್ಯಾಯಾಧೀಶರು ಶನಿವಾರದಿಂದ ಆರಂಭವಾಗಲಿದ್ದ ಬೇಸಿಗೆ ರಜೆಗೆ ಹೊರಡುವ ತರಾತುರಿಯಲ್ಲಿದ್ದರು.
ಆದರೆ, ನ್ಯಾಯಮೂರ್ತಿ ಶಾರುಕ್ ಜೆ ಕಥಾವಾಲಾ ತುರ್ತು ಅರ್ಜಿಗಳ ಇತ್ಯರ್ಥಕ್ಕಾಗಿ ರಾತ್ರಿ 3.30ರವರೆಗೆ ಕೆಲಸ ಮಾಡಿದರು.
100ಕ್ಕೂ ಹೆಚ್ಚು ಅರ್ಜಿ: ‘ಸುಮಾರು 100ಕ್ಕೂ ಹೆಚ್ಚು ಸಿವಿಲ್ ಅರ್ಜಿಗಳ ವಿಚಾರಣೆ ಬಾಕಿ ಇತ್ತು’ ಎಂದು ವಕೀಲರೊಬ್ಬರು ತಿಳಿಸಿದ್ದಾರೆ.ನ್ಯಾಯಮೂರ್ತಿ ಕಥಾವಾಲಾ ಕೆಲಸ ಮುಗಿಸಿ ಹೊರಡುವವರೆಗೂ ವಕೀಲರು ಕೂಡ ನ್ಯಾಯಾಲಯದಲ್ಲಿಯೇ ಇದ್ದರು.
‘ಬೆಳಗ್ಗೆ ಎಷ್ಟು ಲವಲವಿಕೆಯಿಂದ ಇದ್ದರೋ ತಡರಾತ್ರಿ ಕೂಡ ಹಾಗೆಯೇ ಇದ್ದರು. ನನ್ನ ಅರ್ಜಿಯೇ ಕೊನೆಯ ವಿಚಾರಣೆಯಾಗಿತ್ತು. ಆ ಸಂದರ್ಭದಲ್ಲಿಯೂ ನ್ಯಾಯಮೂರ್ತಿ ತಾಳ್ಮೆಯಿಂದ ವಾದ, ವಿವಾದ ಆಲಿಸಿ ಆದೇಶ ನೀಡಿದರು’ ಎಂದು ಮತ್ತೊಬ್ಬ ಹಿರಿಯ ವಕೀಲ ಪ್ರವೀಣ್ ಸಮ್ದಾನಿ ಹೇಳಿದ್ದಾರೆ.
ಶುಕ್ರವಾರ ರಾತ್ರಿ 3.30ಕ್ಕೆ ಮನೆಗೆ ಹೊರಟ ಅವರು, ಶನಿವಾರ ಯಥಾರೀತಿ ಬೆಳಿಗ್ಗೆ ನ್ಯಾಯಾಲಯಕ್ಕೆ ಬಂದರು. ಸಾಮಾನ್ಯವಾಗಿ ಇತರ ನ್ಯಾಯಮೂರ್ತಿಗಳು ಕೆಲಸ ಆರಂಭಿಸುವ 1 ತಾಸು ಮೊದಲು ಕಥಾವಾಲಾ ಕಲಾಪ ಆರಂಭಿಸುತ್ತಾರೆ. ನ್ಯಾಯಾಲಯದ ಅವಧಿ ಪೂರ್ಣಗೊಂಡ ನಂತರವೂ ಅವರು ಕೆಲಸ ಮುಂದುವರಿಸುತ್ತಾರೆ ಎಂದು ಸಿಬ್ಬಂದಿ ಹೇಳಿದ್ದಾರೆ.
ಕಥಾವಾಲಾ ಎರಡು ವಾರದ ಹಿಂದೆ ನ್ಯಾಯಾಲಯದ ತಮ್ಮ ಕಚೇರಿಯಲ್ಲಿಯೇ ತಡರಾತ್ರಿವರೆಗೂ ಅರ್ಜಿಗಳ ವಿಚಾರಣೆ ನಡೆಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.