ನವದೆಹಲಿ (ಪಿಟಿಐ): ರಾಷ್ಟ್ರದ ಈಶಾನ್ಯ ರಾಜ್ಯಗಳಲ್ಲಿ 58,000 ಕೋಟಿ ರೂಪಾಯಿಯ ಹಗರಣಗಳು ನಡೆದಿವೆ ಎಂದು ಟೀಕಿಸಿರುವ ಬಿಜೆಪಿ ಈ ಕುರಿತು ನಿರ್ದಿಷ್ಟ ಕಾಲಮಿತಿಯೊಳಗೆ ತನಿಖೆ ನಡೆಸಲು ಒತ್ತಾಯಿಸಿದೆ.ಭ್ರಷ್ಟಾಚಾರ ನಿಯಂತ್ರಿಸುವ ಬಗ್ಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಸೆ ಹುಟ್ಟಿಸುವ ಭರವಸೆಗಳನ್ನು ನೀಡಿದ್ದರು. ಆದರೆ ಅವೆಷ್ಟು ಪೊಳ್ಳು ಎಂಬುದು ಇದೀಗ ಬಯಲಾಗುತ್ತಿದೆ. ಕೇಂದ್ರ ನಾಯಕತ್ವದ ಜತೆಗೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳೆಲ್ಲಾ ಭ್ರಷ್ಟರಾಗಿದ್ದು, ಹಣ ಮಾಡುವ ದಂಧೆಯಲ್ಲಿ ಮುಳುಗಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಆಪಾದಿಸಿದರು.
ಈಶಾನ್ಯ ರಾಜ್ಯಗಳಲ್ಲಿ ನಡೆದಿರುವ ಹಗರಣಗಳ ಕುರಿತು ತಮ್ಮ ಪಕ್ಷದ ಸತ್ಯ ಶೋಧನಾ ಸಮಿತಿ ಹೊರತಂದಿರುವ ವರದಿಯನ್ನು ಇದೇ ಸಂದರ್ಭದಲ್ಲಿ ಸುದ್ದಿಗಾರರಿಗೆ ನೀಡಿದರು.ಪಕ್ಷ ಸಿದ್ಧಪಡಿಸಿರುವ ಈ ವರದಿಗೆ ಮಾಹಿತಿ ಹಕ್ಕನ್ನು ಬಳಸಿಕೊಂಡು ಸಂಗ್ರಹಿಸಿದ ಅಂಕಿ ಅಂಶಗಳು ಸಾಕ್ಷ್ಯದ ಬಲ ನೀಡಿವೆ ಎಂದು ಅವರು ವಿವರಿಸಿದರು.ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂಸತ್ತಿನಲ್ಲಿ ಈಶಾನ್ಯ ರಾಜ್ಯಗಳನ್ನು ಪ್ರತಿನಿಧಿಸುತ್ತಿದ್ದಾರೆ. ಈ ಹಗರಣಗಳಿಗೆ ಆಸ್ಪದವಾಗದಂತೆ ನೋಡಿಕೊಳ್ಳುವ ಹೊಣೆ ಅವರದ್ದಾಗಿತ್ತು. ಹಗರಣಗಳಿಂದಾಗಿ ಈಶಾನ್ಯ ರಾಜ್ಯಗಳ ಅಭಿವೃದ್ಧಿ ತೀವ್ರ ಕುಂಠಿತವಾಗಿದೆ ಎಂದರು.
ಈ ಕುರಿತು ತಮ್ಮ ನೇತೃತ್ವದಲ್ಲಿ ರಾಷ್ಟ್ರಪತಿ ಬಳಿಗೆ ನಿಯೋಗ ಕೊಂಡೊಯ್ಯುವುದಾಗಿ ಹಾಗೂ ಲೋಕಸಭೆ- ರಾಜ್ಯಸಭೆಗಳ ಪ್ರತಿಪಕ್ಷ ನಾಯಕರು ಪ್ರಧಾನಿ ಅವರನ್ನು ಭೇಟಿಯಾಗಲಿರುವುದಾಗಿ ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.