ಲಖನೌ: ಕರ್ನಾಟಕ ವೃಂದದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಸಾವಿನ ತನಿಖೆಯನ್ನು ತ್ವರಿತಗೊಳಿಸಲು ಒತ್ತಾಯಿಸುವುದಕ್ಕಾಗಿ ಅವರ ಕುಟುಂಬದ ಸದಸ್ಯರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಸದ್ಯವೇ ಭೇಟಿಯಾಗಲಿದ್ದಾರೆ.
ರಾಜನಾಥ್ ಅವರ ನಿಕಟವರ್ತಿಗಳನ್ನು ಅನುರಾಗ್ ಕುಟುಂಬದ ಸದಸ್ಯರು ಶೀಘ್ರ ಸಂಪರ್ಕಿಸಲಿದ್ದಾರೆ. ಅವರ ಮೂಲಕ ರಾಜನಾಥ್ ಅವರ ಭೇಟಿಗೆ ಸಮಯ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ರಾಜನಾಥ್ ಅವರು ಲಖನೌ ಸಂಸದ.
ಸಾವಿನ ತನಿಖೆಯನ್ನು ಕೈಗೆತ್ತಿಕೊಳ್ಳಲು ಸಿಬಿಐ ವಿಳಂಬ ಮಾಡುತ್ತಿರುವುದು ಅನುರಾಗ್ ಕುಟುಂಬದ ಚಿಂತೆಗೆ ಕಾರಣವಾಗಿದೆ. ತನಿಖೆ ವಿಳಂಬವಾದರೆ ಮಹತ್ವದ ಸಾಕ್ಷ್ಯಗಳು ನಾಶವಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ತನಿಖೆಯನ್ನು ಸಿಬಿಐ ಸದ್ಯವೇ ಆರಂಭಿಸಲಿದೆ ಎಂಬ ವರದಿಗಳು ಇತ್ತೀಚೆಗೆ ಪ್ರಕಟವಾಗಿದ್ದವು. ಅದರ ನಡುವೆಯೇ ರಾಜನಾಥ್ ಅವರನ್ನು ಭೇಟಿಯಾಗಲು ಕುಟುಂಬದ ಸದಸ್ಯರು ಮುಂದಾಗಿದ್ದಾರೆ. ಅನುರಾಗ್ ಅವರ ಸಾವಿನ ನಂತರ ತಕ್ಷಣವೇ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಉತ್ತರ ಪ್ರದೇಶ ಸರ್ಕಾರ ಶಿಫಾರಸು ಮಾಡಿತ್ತು.
ಉತ್ತರ ಪ್ರದೇಶ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ ಅನುರಾಗ್ ಅವರು ಕೆಲಸ ಮಾಡುತ್ತಿದ್ದ ಬೆಂಗಳೂರಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿತ್ತು.
ಅನುರಾಗ್ ಅವರು ಕರ್ನಾಟಕದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತರಾಗಿದ್ದರು. ಅವರ ಮೃತದೇಹ ಲಖನೌದ ಸರ್ಕಾರಿ ಅತಿಥಿಗೃಹದ ಸಮೀಪದ ರಸ್ತೆಯಲ್ಲಿ ಕಳೆದ ತಿಂಗಳು ಪತ್ತೆಯಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.