ADVERTISEMENT

ತರೂರ್‌ಗೆ ಸಳ್ಳುಪತ್ತೆ ಪರೀಕ್ಷೆ

ಸುನಂದಾ ಸಾವು ಅಸಹಜ: ದೆಹಲಿ ಪೊಲೀಸ್ ಆಯುಕ್ತ

​ಪ್ರಜಾವಾಣಿ ವಾರ್ತೆ
Published 16 ಜನವರಿ 2016, 10:54 IST
Last Updated 16 ಜನವರಿ 2016, 10:54 IST
ತರೂರ್‌ಗೆ ಸಳ್ಳುಪತ್ತೆ ಪರೀಕ್ಷೆ
ತರೂರ್‌ಗೆ ಸಳ್ಳುಪತ್ತೆ ಪರೀಕ್ಷೆ   

ನವದೆಹಲಿ (ಪಿಟಿಐ): ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಅವರ ಪತ್ನಿ ಸುನಂದಾ ಪುಷ್ಕರ್‌ ಅವರ ವಿವಾದಾತ್ಮಕ ಸಾವಿನ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.

ವಿಷಪ್ರಾಶನದಿಂದ ಸುನಂದಾ ಸಾವು ಸಂಭವಿಸಿದೆ ಎಂಬ ಏಮ್ಸ್‌ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ವರದಿಯನ್ನು ಅಮೆರಿಕದ ಫೆಡರಲ್‌ ಬ್ಯೂರೊ ಆಫ್‌ ಇನ್ವೆಸ್ಟಿಗೇಷನ್‌ (ಎಫ್‌ಬಿಐ) ಅನುಮೋದಿಸಿದೆ.

ಹಾಗಾಗಿ ಶಶಿ ತರೂರ್‌ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ದೆಹಲಿ ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ. ಸುಳ್ಳು ಪತ್ತೆ ಪರೀಕ್ಷೆ ನಡೆಸಲು ನ್ಯಾಯಾಲಯದ ಅನುಮತಿ ಅಗತ್ಯವಾಗಿದ್ದು ಪಟಿಯಾಲಾ ಹೌಸ್‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ತರೂರ್‌ ಅವರನ್ನು ಈವರೆಗೆ ಮೂರು ಬಾರಿ ವಿಚಾರಣೆಗೆ ಒಳಪಡಿಸಲಾಗಿದೆ. ತರೂರ್‌ ಅವರ ಮನೆ ಕೆಲಸದಾಳು ನಾರಾಯಣ್‌ ಸಿಂಗ್‌ ಸೇರಿ ಆರು ಜನರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ.

ಈಗ ತನಿಖಾಧಿಕಾರಿಗಳು ತರೂರ್‌ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸುವ ಬಗ್ಗೆ ಚರ್ಚಿಸಲು ಸಭೆಗಳನ್ನು ನಡೆಸುತ್ತಿದ್ದಾರೆ. ‘ಸುನಂದಾ ಅವರ ಒಳಾಂಗಗಳ ಪರೀಕ್ಷೆಯ ವರದಿ ಮತ್ತು ಸುಳ್ಳು ಪತ್ತೆ ಪರೀಕ್ಷೆಯೇ ಪ್ರಕರಣದ ತನಿಖೆಯ ಮುಂದಿನ ಹಾದಿ ನಿರ್ಧರಿಸಲಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಪಾಯಕಾರಿ ರಾಸಾಯನಿಕ: ಸುನಂದಾ ಅವರ ದೇಹದಲ್ಲಿ ‘ಅಪಾಯಕಾರಿ ರಾಸಾಯನಿಕ’ ಪತ್ತೆಯಾಗಿದ್ದು ಅದುವೇ ಸಾವಿಗೆ ಕಾರಣ ಎಂದು ಎಫ್‌ಬಿಐ ಸ್ಪಷ್ಟಪಡಿಸಿದೆ. ಎಫ್‌ಬಿಐ ನೀಡಿರುವ ಫಲಿತಾಂಶವನ್ನು ವಿಶ್ಲೇಷಿಸಿ ಏಮ್ಸ್‌ ನೀಡಿರುವ ವರದಿಯ ಅಂಶಗಳನ್ನು ದೆಹಲಿ ಪೊಲೀಸ್‌ ಆಯುಕ್ತ ಬಿ.ಎಸ್‌. ಬಸ್ಸಿ ಬಹಿರಂಗಪಡಿಸಿದ್ದಾರೆ. ಸುನಂದಾ ಅವರ ಸಾವು ಅಸಹಜ, ಆದರೆ ಅವರ ದೇಹದಲ್ಲಿ ವಿಕಿರಣಶೀಲ ಅಂಶಗಳು ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ವಿಷಪ್ರಾಶನದಿಂದ ಸುನಂದಾ ಸಾವು ಸಂಭವಿಸಿದೆ ಎಂದು ಏಮ್ಸ್‌ ವರದಿ ಹೇಳಿತ್ತು. ಅದನ್ನೇ ಎಫ್‌ಬಿಐ ವರದಿ ಕೂಡ ಹೇಳಿದೆ ಎಂದು ಏಮ್ಸ್‌ನ ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥ ಸುಧೀರ್‌ ಗುಪ್ತಾ ಹೇಳಿದ್ದಾರೆ.ಏಮ್ಸ್‌ ವರದಿಯಲ್ಲಿಯೇ ವಿಷಪ್ರಾಶನ ಸಾವಿಗೆ ಕಾರಣ ಎಂದು ಹೇಳಲಾಗಿತ್ತು. ಈಗ ಎಫ್‌ಬಿಐ ಅಪಾಯಕಾರಿ ರಾಸಾಯನಿಕ ಇತ್ತು ಎಂದೂ ಹೇಳಿದೆ ಎಂದು ಗುಪ್ತಾ ತಿಳಿಸಿದ್ದಾರೆ.

ಎಲ್ಲ ಆಯಾಮಗಳಿಂದಲೂ ಪ್ರಕರಣದ ತನಿಖೆ ನಡೆಯುತ್ತಿದ್ದು ಶೀಘ್ರವೇ ಪೂರ್ಣ ಚಿತ್ರಣ ದೊರೆಯಲಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್‌. ಬಸ್ಸಿ ಹೇಳಿದ್ದಾರೆ.

ಇಂಜೆಕ್ಷನ್‌ ಗುರುತು: ಸುನಂದಾ ದೇಹದಲ್ಲಿ 12 ಗಾಯಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಹತ್ತನೇ ಗುರುತು ಇಂಜೆಕ್ಷನ್‌ ಚುಚ್ಚಿದ ಗುರುತಾಗಿದೆ. ಒಂದು ಹಲ್ಲಿನಿಂದ ಕಚ್ಚಿದ ಗುರುತು ಕೂಡ ಅವರ ದೇಹದಲ್ಲಿ ಇತ್ತು. ಅವರ ಕೆನ್ನೆಯಲ್ಲಿಯೂ ತರಚಿದ ಗಾಯ ಇತ್ತು ಎಂದು ವರದಿ ಹೇಳಿದೆ.

ನಾವು ಈವರೆಗೆ ನಡೆಸಿರುವ ತನಿಖೆ ಮತ್ತು ಸಂಗ್ರಹಿಸಿರುವ ಸಾಕ್ಷ್ಯಗಳ ಪ್ರಕಾರ ಇದು ಅಸಹಜ ಸಾವು ಎಂದು ಖಚಿತವಾಗಿ ಹೇಳಬಹುದು.– ಬಿ.ಎಸ್‌. ಬಸ್ಸಿ ದೆಹಲಿ ಪೊಲೀಸ್ ಆಯುಕ್ತ

ದ್ವೇಷದ ರಾಜಕಾರಣ: ಆರೋಪ
ಸುನಂದಾ ಪುಷ್ಕರ್‌ ಸಾವಿಗೆ ಸಂಬಂಧಿಸಿದಂತೆ ಬಿಜೆಪಿಯು ಶಶಿ ತರೂರ್ ಹಾಗೂ ಕಾಂಗ್ರೆಸ್‌ನ ಇತರ ನಾಯಕರನ್ನು ‘ಬೇಟೆ’ಯಾಡಿ ದ್ವೇಷ ರಾಜಕಾರಣ ಮಾಡುತ್ತಿದೆ ಪಕ್ಷ ಆರೋಪಿಸಿದೆ.

ADVERTISEMENT

‘ಸುನಂದಾ ಸಾವಿನ ಘಟನೆ ನಡೆದು ಒಂದು ವರ್ಷ ಕಳೆದಿದೆ. ಆದರೆ ಸಾವಿಗೆ ಏನು ಕಾರಣ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ತರೂರ್ ಅವರು ಈ ಪ್ರಕರಣದಲ್ಲಿ ಆರೋಪಿ ಅಲ್ಲ. ಎಫ್‌ಐಆರ್‌ನಲ್ಲೂ ಅವರ ಹೆಸರು ಇಲ್ಲ. ತನಿಖಾ ಸಂಸ್ಥೆಗಳಿಗೆ ಅವರು ಪೂರ್ಣ ಸಹಕಾರ ನೀಡಿದ್ದಾರೆ. ಆದರೆ ಸುಬ್ರಮಣಿಯನ್‌ ಸ್ವಾಮಿ ಅವರಂತಹ ಬಿಜೆಪಿ ನಾಯಕರು ತರೂರ್‌ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.