ಲಖನೌ/ಕೋಲ್ಕತ್ತ (ಪಿಟಿಐ): ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶದ ಪ್ರಮುಖ ಮೌಲ್ವಿಯೊಬ್ಬರು ನೀಡಿರುವ ದೂರಿನ ಅನ್ವಯ ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರಿನ್ ಅವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಪೊಲೀಸರ ಈ ಕ್ರಮಕ್ಕೆ ತಸ್ಲಿಮಾ ನಸ್ರಿನ್ ಅವರು ಆಘಾತ ವ್ಯಕ್ತಪಡಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಉತ್ತರ ಪ್ರದೇಶದ ವಿವಾದಾತ್ಮಕ ಮೌಲ್ವಿ ಮೌಲಾನ ತೌಕೀರ್ ರಜಾ ಖಾನ್ ಅವರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದನ್ನು ತಸ್ಲಿಮಾ ಅವರು ನ. 6ರಂದು ಟ್ವಿಟ್ಟರ್ನಲ್ಲಿ ಟೀಕಿಸಿದ್ದರು.
ಲೇಖಕಿ ಮಾಡಿರುವ ಕೆಲವು ಟ್ವೀಟ್ಗಳಿಗೆ ಆಕ್ಷೇಪ ವ್ಯಕ್ತಪಡಿಸಿರುವ ದರ್ಗಾ–ಇ–ಅಲಾ ಹಜರತ್ನ ಮುಖ್ಯಸ್ಥ ಮೌಲಾನ ಸುಭನ್ ರಜಾ ಖಾನ್ ಸುಭನಿ ಮಿಯಾನಿ ಅವರ ಪುತ್ರ ಹಸನ್ ರಜಾ ಖಾನ್ ನೂರಿ ಅವರು ಬುಧವಾರ ರಾತ್ರಿ ಉತ್ತರ ಪ್ರದೇಶದ ಕೊತ್ವಾಲಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೌಲ್ವಿಗಳ ಕುರಿತಾಗಿ ತಸ್ಲಿಮಾ ಅವರು ಟ್ವಿಟ್ಟರ್ನಲ್ಲಿ ಮಾಡಿರುವ ಟ್ವೀಟ್ಗಳು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ಸತ್ಯ ಮಾತಾಡಿದ್ದೇನೆ’
‘ಆ ಟ್ವೀಟ್ಗಳಲ್ಲಿ ಏನು ತಪ್ಪು ಮಾಡಿ-ದ್ದೇನೆ ಎನ್ನುವುದು ನನಗೆ ತಿಳಿದಿಲ್ಲ. ನಾನು ಸತ್ಯವನ್ನಷ್ಟೇ ಹೇಳಿದ್ದೇನೆ ’ ಎಂದು ತಸ್ಲಿಮಾ ತಿಳಿಸಿದ್ದಾರೆ.
‘ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿರುವ ಭಾರತದಂತಹ ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಇಂತಹ ಬೆಳವಣಿಗೆಗಳು ಹೇಗೆ ನಡೆಯಲು ಸಾಧ್ಯ. ಎಫ್ಐಆರ್ ದಾಖಲಾಗಿರುವುದನ್ನು ಕೇಳಿ ನನಗೆ ಆಘಾತವಾಯಿತು’ ಎಂದು ತಸ್ಲಿಮಾ ಹೇಳಿದ್ದಾರೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪ ಹೊತ್ತಿರುವ ತಸ್ಲಿಮಾ ನಸ್ರಿನ್, ಮೂಲಭೂತವಾದಿಗಳ ಬೆದರಿಕೆ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಿಂದ ಬಲವಂತವಾಗಿ ಭಾರತಕ್ಕೆ ಪಲಾಯನ ಮಾಡಿದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.