ಹೈದರಾಬಾದ್: ತಿರುಪತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹತ್ತು ಶಿಶುಗಳು 48 ಗಂಟೆಗಳ ಅವಧಿಯೊಳಗೆ ಸಾವನ್ನಪ್ಪಿದ್ದು, ವೈದ್ಯರ ತೀವ್ರ ಕೊರತೆ ಹಾಗೂ ಆಮ್ಲಜನಕ ಸಮರ್ಪಕವಾಗಿ ದೊರಕದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಬುಧವಾರ ಒಂದೇ ದಿನ ಹತ್ತು ಶಿಶುಗಳು ಮೃತಪಟ್ಟಿದ್ದರೆ ಗುರುವಾರ ಮತ್ತೆ ಮೂರು ಶಿಶುಗಳು ಸಾವನ್ನಪ್ಪಿವೆ. ಆದರೆ ವೈದ್ಯರು ಈ ಸಂಬಂಧ ಸರಿಯಾದ ಮಾಹಿತಿ ನೀಡುತ್ತಿಲ್ಲ.
ಸುದ್ದಿ ತಿಳಿದು ಆಸ್ಪತ್ರೆಗೆ ಧಾವಿಸಿದ ವೈಎಸ್ಆರ್ ಕಾಂಗ್ರೆಸ್ ಶಾಸಕ ಭೂಮನ ಕರುಣಾಕರ ರೆಡ್ಡಿ `ಇವೆಲ್ಲ ಅಧಿಕಾರಿಗಳಿಂದಾದ ಕೊಲೆಗಳು~ ಎಂದು ಆರೋಪಿಸಿ ಮೃತ ಶಿಶುಗಳ ಸಂಬಂಧಿಕರ ಜತೆಗೂಡಿ ಪ್ರತಿಭಟನೆ ನಡೆಸಿದರು.
ಶಿಶುಗಳ ಸಾವಿಗೆ ಅವುಗಳು ವಿವಿಧ ರೋಗಗಳಿಂದ ಬಳಲುತ್ತಿರುವುದೇ ಕಾರಣ, ಮೇಲಾಗಿ ಈ ಶಿಶುಗಳನ್ನು ರೋಗ ಉಲ್ಬಣಗೊಂಡ ನಂತರವೇ ಇಲ್ಲಿಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆ ಅಧೀಕ್ಷಕ ಡಾ.ವೀರಾಸ್ವಾಮಿ ತಿಳಿಸಿದರು.
ಆಸ್ಪತ್ರೆಗೆ ಇನ್ನೂ 20 ವೈದ್ಯರ ಅಗತ್ಯವಿದ್ದು, ಆಮ್ಲಜನಕ ಖರೀದಿಗೂ ಹೆಚ್ಚಿನ ಹಣ ಬೇಕು ಎಂದು ತಿಳಿಸಿದರು. ಈ ನಡುವೆ ಘಟನೆಯ ಕುರಿತು ಕಳವಳವ್ಯಕ್ತಪಡಿಸಿದ ಮುಖ್ಯಮಂತ್ರಿ ಕಿರಣಕುಮಾರ್ ರೆಡ್ಡಿ ಅವರ ಸೂಚನೆಯ ಮೇರೆಗೆ ಈ ಕುರಿತು ತನಿಖೆ ಕೈಗೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.