ಹೈದರಾಬಾದ್, (ಐಎಎನ್ಎಸ್): ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸುತ್ತಿರುವ ತೆಲಂಗಾಣ ಜಂಟಿ ಕ್ರಿಯಾ ಸಮಿತಿ ಕಾರ್ಯಕರ್ತರು ಶನಿವಾರದಿಂದ ಮೂರು ದಿನ ರೈಲು ತಡೆ ಚಳುವಳಿಯನ್ನು ಆರಂಭಿಸಿದ ಹಿನ್ನೆಲೆಯಲ್ಲಿ ಸಮಿತಿಯ ವಿವಿಧ ನಾಯಕರು ಸೇರಿದಂತೆ ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಮೌಲಾ ಅಲಿ ಬಳಿಯಲ್ಲಿ ರೈಲು ಹಳಿಗಳ ಮೇಲೆ ಪ್ರತಿಭಟನೆ ನಡೆಸುತ್ತಿದ್ದ್ದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್)ಯ ಸಾಂಸ್ಕೃತಿಕ ಸಂಘಟನೆ ತೆಲಂಗಾಣ ಜಾಗೃತಿ ಸಮಿತಿಯ ನಾಯಕಿ ಕೆ. ಕವಿತಾ ಶನಿವಾರ ಬಂಧಿತರಾದವರಲ್ಲಿ ಮೊದಲಿಗರು ಎಂದು ಪೊಲಿಸರು ತಿಳಿಸಿದ್ದಾರೆ. ಕೆ. ಕವಿತಾ ಅವರು ಟಿಆರ್ ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಅವರ ಮಗಳು.
ಇದೇ ಸಮಯದಲ್ಲಿ ರೈಲು ತಡೆ ಚಳುವಳಿಯಲ್ಲಿ ಭಾಗವಹಿಸಲು ತೆರಳುತ್ತಿದ್ದ ರಾವ್ ಅವರ ಮಗ ಮತ್ತು ಟಿಆರ್ ಎಸ್ ಶಾಸಕ ಕೆ.ತಾರಕ ರಾಮ ರಾವ್ ಸೇರಿದಂತೆ ಜಂಟಿ ಕ್ರಿಯಾ ಸಮಿತಿ (ಜೆಎಸಿ)ಯ ನಾಯಕರು ಮತ್ತು ಇತರ ಕಾರ್ಯಕರ್ತರನ್ನು ಸಿಕಂದರಾಬಾದ್ ನ ಸಿತಾಫಲ್ಮಂಡಿಯಲ್ಲಿ ಬಂಧಿಸಲಾಯಿತು.
ರೈಲು ತಡೆ ಚಳುವಳಿಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಆಡಳಿತ ಕಾಂಗ್ರೇಸ್ ಪಕ್ಷದ ಪೊನ್ನಮ್ಮ ಪ್ರಭಾಕರ್, ಜಿ. ವಿವೇಕ್ ಮತ್ತು ರಾಜಯ್ಯ ಮೂವರು ಸಂಸದರನ್ನು ಕರೀಂಮ್ ನಗರ ಮತ್ತು ವಾರಂಗಲ್ ಜಿಲ್ಲೆಗಳಲ್ಲಿ ಬಂಧಿಸಲಾಗಿದೆ.
~ಚಳುವಳಿಯಲ್ಲಿ ಭಾಗವಹಿಸುವ ಜನರ ಮೇಲೆ ಪೊಲೀಸರು ದೌರ್ಜನ್ಯ ನಡೆಸಲು ಮುಂದಾದರೆ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ~ ಎಂದು ಟಿಆರ್ ಎಸ್ ನಾಯಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.