ಚೆನ್ನೈ(ಪಿಟಿಐ/ಐಎಎನ್ಎಸ್): ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ - ಡಿಎಂಕೆ ಸೀಟು ಹಂಚಿಕೆ ತೊಡಕಾಗಿ ಪರಿಣಮಿಸಿದ್ದು, 7 ವರ್ಷದ ಮೈತ್ರಿ ಮುರಿದು ಬೀಳುವ ಸಂಭವ ಹೆಚ್ಚಾಗಿದೆ.
ಡಿಎಂಕೆ ಅಧ್ಯಕ್ಷ ಹಾಗೂ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಹಾಗೂ ಉಪಮುಖ್ಯಮಂತ್ರಿ ಸ್ಟಾಲಿನ್ ಅವರು ಇಲ್ಲಿನ ಪಕ್ಷದ ಮುಖ್ಯ ಕಚೇರಿಯಲ್ಲಿ ತಮ್ಮ ಪಕ್ಷದ ಮುಖಂಡರ ಜತೆಗೆ ಶನಿವಾರ ಬೆಳಿಗ್ಗೆ ಸೀಟು ಹಂಚಿಕೆ ಸಂಬಂಧ ಮಾತುಕತೆ ನಡೆಸಿದರು.
ಪ್ರಸ್ತುತ ಕಾಂಗ್ರೆಸ್ ಒಟ್ಟು 234 ಕ್ಷೇತ್ರಗಳಲ್ಲಿ 63 ಕ್ಷೇತ್ರಗಳನ್ನು ತನಗೆ ಬಿಟ್ಟು ಕೊಡಬೇಕೆಂದು ಡಿಎಂಕೆಯನ್ನು ಒತ್ತಾಯಿಸುತ್ತಿದೆ. ಆದರೆ ಡಿಎಂಕೆ ಇದಕ್ಕೆ ಸಮ್ಮತಿಸುತ್ತಿಲ್ಲ. ಉಭಯ ಪಕ್ಷಗಳು ಕೇವಲ ದೂರವಾಣಿ ಮುಖಾಂತರವೇ ಮಾತುಕತೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಡಿಎಂಕೆ ಯು ಕಾಂಗ್ರೆಸ್ ಬೇಡಿಕೆ ನ್ಯಾಯಯುತವಾಗಿಲ್ಲ ಎಂದು ಟೀಕಿಸಿದ್ದು, ಶನಿವಾರ ಮೈತ್ರಿ ಮುಂದುವರೆಸಬೇಕೆ ಬೇಡವೆ ಎಂಬುದನ್ನು ನಿರ್ಧರಿಸುವುದಾಗಿ ಈಗಾಗಲೇ ತಿಳಿಸಿವೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ತನ್ನ ಬೇಡಿಕೆಯಲ್ಲಿ ಸ್ವಲ್ಪಮಟ್ಟಿಗೆ ಕಡಿಮೆಮಾಡಿಕೊಳ್ಳಲು ಸಾಧ್ಯ ಎಂದು ಹೇಳಿದೆ.
ಸಣ್ಣಪುಟ್ಟ ಪಕ್ಷಗಳು ಈಗಾಗಲೇ ಕಾಂಗ್ರೆಸ್ ವಿರುದ್ಧ ಈಗಾಗಲೇ ದನಿ ಎತ್ತಿದ್ದು, ಮೈತ್ರಿಕೂಟದಲ್ಲಿ ಬಿರುಕು ಸ್ವಷ್ಟವಾಗಿಯೇ ಕಾಣಹತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.