ನವದೆಹಲಿ: ಗೋವಾ–ಮುಂಬೈ ನಡುವೆ ಸಂಚರಿಸುವ ಉನ್ನತ ಸೌಲಭ್ಯಗಳನ್ನು ಹೊಂದಿರುವ ತೇಜಸ್ ಎಕ್ಸ್ಪ್ರೆಸ್ ರೈಲಿನಲ್ಲಿ ಭಾನುವಾರ ಉಪಹಾರ ಸೇವಿಸಿರುವ ಪ್ರಯಾಣಿಕರ ಪೈಕಿ 24 ಜನ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಷಾಹಾರ ಸೇವನೆಯಿಂದ ಹಲವು ಪ್ರಯಾಣಿಕರು ಅಸ್ವಸ್ಥಗೊಂಡಿರುವ ಕುರಿತು ಸಹ ಪ್ರಯಾಣಿಕರು ರೈಲ್ವೆ ಇಲಾಖೆಗೆ ಸಂದೇಶ ರವಾನಿಸಿದ್ದಾರೆ. ಚಿಪ್ಲುನ್ ರೈಲ್ವೆ ನಿಲ್ದಾಣದಲ್ಲಿ ನಂ.22120 ತೇಜಸ್ ಎಕ್ಸ್ಪ್ರೆಸ್ನ ಪ್ರಯಾಣಿಕರಿಗೆ ರೈಲ್ವೆ ವೈದ್ಯರು ಚಿಕಿತ್ಸೆ ನೀಡಿರುವುದಾಗಿ ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸ ನಿಗಮ(ಐಆರ್ಸಿಟಿಸಿ) ಅಧಿಕೃತ ಪ್ರಕಟಣೆ ಹೊರಡಿಸಿದೆ.
ಸೆಮಿ ಹೈಸ್ಪೀಡ್ ರೈಲು ತೇಜಸ್ ರೈಲಿನಲ್ಲಿ 230 ಪ್ರಯಾಣಿಕರು ಉಪಹಾರ ಸೇವಿಸಿದ್ದಾರೆ. ಇದರಲ್ಲಿ 117 ಸಸ್ಯಾಹಾರ ಹಾಗೂ 113 ಮಾಂಸಹಾರಕ್ಕೆ ಬೇಡಿಕೆ ಇತ್ತು. ಅಸ್ವಸ್ಥಗೊಂಡಿರುವ ಪ್ರಯಾಣಿಕರಲ್ಲಿ ಹೆಚ್ಚಿನವರು ಆಮ್ಲೆಟ್ ಸೇವಿಸಿದ್ದರು. ಆಹಾರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿರುವುದಾಗಿ ಭಾರತೀಯ ರೈಲ್ವೆ ಇಲಾಖೆ ತಿಳಿಸಿರುವುದಾಗಿ ದಿ ಹಿಂದು ವರದಿ ಮಾಡಿದೆ.
ಆಹಾರ ಪೂರೈಕೆಗಾಗಿ ಜೆ.ಕೆ.ಘೋಷ್ ಸಂಸ್ಥೆಗೆ ಐಆರ್ಸಿಟಿಸಿ ಪರವಾನಗಿ ನೀಡಿದೆ.
ಚಿಪ್ಲುನ್ನ ಲೈಫ್ಕೇರ್ ಆಸ್ಪತ್ರೆಗೆ ಅಸ್ವಸ್ಥರನ್ನು ದಾಖಲಿಸಲಾಗಿದ್ದು, ಚೇತರಿಸಿಕೊಂಡಿರುವುದಾಗಿ ಐಆರ್ಸಿಟಿಸಿ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.