ಲಖನೌ/ಅಹಮದಾಬಾದ್ (ಪಿಟಿಐ): ‘‘ರಾಹುಲ್ ಗಾಂಧಿ ಅವರು ದಲಿತರ ಮನೆಗೆ ‘ಮಧುಚಂದ್ರ’ಕ್ಕಾಗಿ ತೆರಳುತ್ತಾರೆ’’ ಎಂದು ಹೇಳಿಕೆ ನೀಡಿದ್ದ ಯೋಗ ಗುರು ಬಾಬಾ ರಾಮ್ದೇವ್ ವಿರುದ್ಧ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಲಾಗಿದೆ.
ಅಹಮದಾಬಾದ್ನ ‘ಅಂಬೇಡ್ಕರ್್ ಕಾರ್ವಾನ್್’ ಎಂಬ ಸರ್ಕಾರೇತರ ಸಂಸ್ಥೆಯೊಂದು ರಾಮ್ದೇವ್್ ವಿರುದ್ಧ ಈ ಕಾಯ್ದೆ ಅಡಿ ಎಫ್ಐಆರ್್ ದಾಖಲಿಸಿದೆ.
ಕಾಂಗ್ರೆಸ್ನ ದಲಿತ್ ಮೋರ್ಚಾ ಸಹ ಇದೇ ಕಾಯ್ದೆ ಅಡಿ ರಾಮ್ದೇವ್ ವಿರುದ್ಧ ದೂರು ನೀಡಿದೆ. ರಾಮ್ದೇವ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದರಿಂದ, ಚುನಾವಣೆ ಮುಗಿಯುವ ತನಕ ಲಖನೌದಲ್ಲಿ ಅವರು ಯಾವುದೇ ಕಾರ್ಯಕ್ರಮ ನಡೆಸದಂತೆ ಜಿಲ್ಲಾಡಳಿತವು ನಿಷೇಧ ವಿಧಿಸಿದೆ.
‘ತಮ್ಮ ಸಂಸ್ಥೆಯ ವತಿಯಿಂದ ಯೋಗ ಕಾರ್ಯಕ್ರಮಗಳನ್ನು ಮಾತ್ರ ನಡೆಸಲಾಗುವುದು. ಅದನ್ನು ಹೊರತುಪಡಿಸಿದರೆ ಯಾವುದೇ ಸಮುದಾಯಕ್ಕೆ ನೋವುಂಟು ಮಾಡುವ ರೀತಿಯ ಹೇಳಿಕೆಗಳನ್ನು ನೀಡುವುದಿಲ್ಲ’ ಎಂದು ಈ ಮುಂಚೆ ರಾಮ್ದೇವ್ ಅವರಿಂದ ಪ್ರಮಾಣಪತ್ರ ಪಡೆಯಲಾಗಿತ್ತು. ಆದರೆ ರಾಮ್ದೇವ್ ಅವರ ಈಚಿನ ಹೇಳಿಕೆ ವಿರೋಧಿಸಿ ಪ್ರತಿಭಟನೆಗಳು ನಡೆದಿರುವುದರಿಂದ ನಗರದಲ್ಲಿ ಮೇ 16ರವರೆಗೆ ಅವರು ಯಾವುದೇ ಕಾರ್ಯಕ್ರಮ ನಡೆಸದಂತೆ ನಿಷೇಧ ಹೇರಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ರಾಮ್ದೇವ್ ಅವರು ಏ.25ರಂದು ರಾಹುಲ್ ಕುರಿತು ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅವರ ಬಂಧನಕ್ಕಾಗಿ ಆಗ್ರಹಿಸಿದೆ. ‘ರಾಮ್ದೇವ್ ಅವರು ದಲಿತ ಸಮುದಾಯವನ್ನು ಅವಮಾನಿಸಿದ್ದಾರೆ. ಇಂತಹ ಅಪರಾಧಗಳಿಗೆ ಕ್ಷಮೆ ಸಾಧ್ಯವೇ ಇಲ್ಲ’ ಎಂದು ಪಕ್ಷದ ಮುಖಂಡ ರಷೀದ್ ಅಲ್ವಿ ಹೇಳಿದ್ದಾರೆ.
ಅಹಮದಾಬಾದ್್ ವರದಿ: ರಾಮ್ದೇವ್ ಅವರ ಹೇಳಿಕೆ ವಿವಾದಕ್ಕೆ ಗುರಿಯಾದ ಬೆನ್ನಲ್ಲೇ ಚುನಾವಣಾ ಆಯೋಗವು ಹೊಸ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ. ಯಾರೇ ಆಗಲಿ ಬೇರೊಬ್ಬ ವ್ಯಕ್ತಿಯ ಖಾಸಗಿ ಜೀವನದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಬಾರದು. ಯಾರು ಈ ನಿರ್ದೇಶನ ಪಾಲಿಸುವುದಿಲ್ಲವೋ ಅಂಥವರಿಗೆ ಚುನಾವಣೆ ಮುಗಿಯುವ ತನಕ ಯಾವುದೇ ಸಾರ್ವಜನಿಕ ಕಾರ್ಯಕ್ರಮ ನಡೆಸದಂತೆ ನಿಷೇಧ ಹೇರಲಾಗುವುದು ಎಂದು ಅದು ಎಚ್ಚರಿಕೆ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.