ಚಪ್ಪರ್ ಚಿರಿ (ಪಂಜಾಬ್) (ಪಿಟಿಐ): ಶಿರೋಮಣಿ ಅಕಾಲಿ ದಳ (ಎಸ್ಎಡಿ) ನಾಯಕ ಪ್ರಕಾಶ್ ಸಿಂಗ್ ಬಾದಲ್ ಅವರು ಪಂಜಾಬ್ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಐದು ಬಾರಿ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸಿದ್ದಾರೆ.
ಬಾದಲ್ ಜೊತೆಗೆ ಅವರ ಪುತ್ರ ಸುಖಬೀರ್ ಮತ್ತು ಇತರ 17 ಜನ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಎಸ್ಎಡಿ-ಬಿಜೆಪಿ ಮೈತ್ರಿಕೂಟದಲ್ಲಿ ಬಾದಲ್ ಮುಖ್ಯಮಂತ್ರಿ, ಅವರ ಪುತ್ರ ಸುಖಬೀರ್ ಉಪ ಮುಖ್ಯಮಂತ್ರಿಯಾಗಿದ್ದಾರೆ.
16 ಸಚಿವರಲ್ಲಿ ಎಸ್ಎಡಿಯಿಂದ 14 ಮತ್ತು ಬಿಜೆಪಿಯಿಂದ ನಾಲ್ವರು ಸಚಿವರು ಅಧಿಕಾರದ ಗೋಪ್ಯತೆ ಪ್ರಮಾಣ ವಚನ ಸ್ವೀಕರಿಸಿದರು.
ಇಲ್ಲಿಂದ 25 ಕಿಮೀ ಅಂತರದಲ್ಲಿರುವ ಚಪ್ಪರ್ ಚಿರಿಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಶಿವರಾಜ್ ಪಾಟೀಲ್ ಪ್ರಮಾಣ ವಚನ ಬೊಧಿಸಿದರು. ಬಿಜೆಪಿಯ ಎಲ್. ಕೆ. ಅಡ್ವಾಣಿ, ನಿತಿನ್ ಗಡ್ಕರಿ, ರಾಜನಾಥ್ಸಿಂಗ್, ವಸುಂಧರಾ ರಾಜೆ, ನವಜೋತ್ ಸಿಧು (ಬಿಜೆಪಿ), ಕೇಂದ್ರ ಸಚಿವ ಮುಕುಲ್ ರಾಯ್ ರಾಚ್ಪಾಲ್ ಸಿಂಗ್, ಕೆ.ಡಿ. ಸಿಂಗ್ (ತೃಣಮೂಲ ಕಾಂಗ್ರೆಸ್), ಕೇಂದ್ರ ಸಚಿವ ಪ್ರಫುಲ್ ಪಟೇಲ್ (ಎನ್ಸಿಪಿ), ಜೆಡಿಯು ಮುಖ್ಯಸ್ಥ ಶರದ್ ಯಾದವ್, ಐಎನ್ಎಲ್ಡಿ ನಾಯಕ ಓಂಪ್ರಕಾಶ್ ಚೌತಾಲ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಹಿಮಾಚಲ ಪ್ರದೇಶದ ಸಿಎಂ ಪ್ರೇಮ್ಕುಮಾರ್ ಧುಮಾಲ್ ಸಾಕ್ಷಿಯಾದರು.
ಒಟ್ಟು 117 ಸದಸ್ಯ ಬಲದ ವಿಧಾನಭೆಯಲ್ಲಿ ಎಸ್ಎಡಿ-ಬಿಜೆಪಿ ಮೈತ್ರಿಕೂಟ 68 ಸ್ಥಾನ ಪಡೆದು ಸ್ಪಷ್ಟ ಬಹುಮತ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.