
ನವದೆಹಲಿ (ಪಿಟಿಐ): ಭೂಕಂಪದಿಂದ ತತ್ತರಿಸಿರುವ ನೇಪಾಳದಲ್ಲಿ ನಡೆಸಲು ಉದ್ದೇಶಿಸಿರುವ ‘ದಾನಿಗಳ ಸಮಾವೇಶ’ಕ್ಕೆ ಭಾರತ ಅಗತ್ಯ ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಅಲ್ಲಿನ ಪ್ರಧಾನಿ ಸುಶೀಲ್ ಕೊಯಿರಾಲ ಅವರಿಗೆ ಭರವಸೆ ನೀಡಿದರು. ಆದರೆ ತಮ್ಮ ಪಾಲ್ಗೊಳ್ಳುವಿಕೆಯ ಸಾಧ್ಯಾಸಾಧ್ಯತೆ ಬಗ್ಗೆ ಮೋದಿ ಯಾವುದೇ ಮಾಹಿತಿ ನೀಡಲಿಲ್ಲ.
ಕಳೆದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಂಭವಿಸಿದ ಭೂಕಂಪದಿಂದ ತೀವ್ರ ಹಾನಿಗೊಳಗಾಗಿರುವ ನೇಪಾಳದ ಪುನರ್ವಸತಿ ಮತ್ತು ಮರುನಿರ್ಮಾಣಕ್ಕಾಗಿ ಕಠ್ಮಂಡುವಿನಲ್ಲಿ ಇದೇ 25ರಂದು ಅಲ್ಲಿನ ಸರ್ಕಾರ ಹಮ್ಮಿಕೊಂಡಿರುವ ದಾನಿಗಳ ಸಮಾವೇಶದ ಕುರಿತು ಗುರುವಾರ ಕೊಯಿರಾಲ ಅವರು ಪ್ರಧಾನಿಗೆ ಮಾಹಿತಿ ನೀಡಿದರು.
ಸಮಾವೇಶಕ್ಕೆ ಸಕಲ ನೆರವನ್ನೂ ನೀಡುವುದಾಗಿ ಪ್ರಧಾನಿ ಮೋದಿ ಅವರು ಭರವಸೆ ನೀಡಿದರು ಎಂದು ಪ್ರಧಾನಿ ಕಚೇರಿ ತಿಳಿಸಿದೆ. ಇದೇ ವೇಳೆ ಕೊಯಿರಾಲ ಅವರು ಮೋದಿ ಅವರ ‘ನೆರೆಕೆರೆಯವರು ಮೊದಲು ನೀತಿ’ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಬಾಂಗ್ಲಾ
ದೇಶ ಪ್ರವಾಸ ಯಶಸ್ವಿಯಾಗಿದ್ದಕ್ಕೆ ಹಾಗೂ ಢಾಕಾದಲ್ಲಿ ಮಾಡಿಕೊಂಡ ದ್ವಿಪಕ್ಷೀಯ ಒಪ್ಪಂದಗಳ ಬಗ್ಗೆ ಶ್ಲಾಘಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.