ನವದೆಹಲಿ (ಪಿಟಿಐ): ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎ.ಕೆ.ಗಂಗೂಲಿ ಅವರ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿರುವ ಕಾನೂನು ತರಬೇತಿ ವಿದ್ಯಾರ್ಥಿನಿಗೆ ದೆಹಲಿ ಪೊಲೀಸರು ಶುಕ್ರವಾರ ಮುಂದೆ ಬಂದು ದೂರು ದಾಖಲಿಸುವಂತೆ ಹೇಳಿದ್ದಾರೆ.
`ಆರೋಪ ಕುರಿತಂತೆ ದೂರು ದಾಖಲಿಸುವ ಜತೆಗೆ ಹೇಳಿಕೆ ನೀಡುವಂತೆ ನಾವು ಯುವತಿಗೆ ಇಮೇಲ್ ಕಳುಹಿಸಿದ್ದೇವೆ. ಕಿರುಕುಳಕ್ಕೆ ಒಳಗಾದವರು ಮುಂದೆ ಬಂದರೆ ಮಾತ್ರ ಮುಂದಿನ ಕ್ರಮ ಕುರಿತು ನಾವು ನಿರ್ಧರಿಸಲು ಸಾಧ್ಯ' ಪೊಲೀಸ್ ಉಪ ಆಯುಕ್ತ (ನವದೆಹಲಿ) ಎಸ್ಬಿಎಸ್ ತ್ಯಾಗಿ ಹೇಳಿದರು.
ಇದೇ ವೇಳೆ, ಅವರು ಈ ಪ್ರಕರಣದಲ್ಲಿ ದೆಹಲಿ ಪೊಲೀಸರು ಯಾವುದೇ ಕಾನೂನು ಸಲಹೆ ಬಯಸಿಲ್ಲ ಎಂದು ಸ್ಪಷ್ಟಪಡಿಸಿದರು.
ಏತನ್ಮಧ್ಯೆ, ದೆಹಲಿ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕರಾದ ಎಸ್.ಎನ್.ಶರ್ಮಾ ಅವರು ತಿಲಕ್ ಮಾರ್ಗ ಪೊಲೀಸ್ ಠಾಣೆಗೆ ಲಿಖಿತ ದೂರೊಂದನ್ನು ನೀಡಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸುವಂತೆ ಹೇಳಿದ್ದಾರೆ.
ಆದಾಗ್ಯೂ, ಪೊಲೀಸರು ಯಾವುದೇ ದೂರು ದಾಖಲಿಸಿಲ್ಲ. ಕಿರುಕುಳಕ್ಕೆ ಒಳಗಾದ ಮಹಿಳೆಯೇ ಮುಂದೆ ಬರಲಿ ಎಂದು ಹೇಳುತ್ತಿದ್ದಾರೆ.
ಕಾನೂನು ತರಬೇತಿ ವಿದ್ಯಾರ್ಥಿನಿ ಜತೆ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎ.ಕೆ. ಗಂಗೂಲಿ ಅವರು ಲೈಂಗಿಕವಾಗಿ ಅಸಭ್ಯ ವರ್ತನೆ ತೋರಿರುವುದನ್ನು ಸುಪ್ರೀಂ ಕೋರ್ಟ್ನ ಸಮಿತಿ ದೃಢಪಡಿಸಿದೆ.
ನ್ಯಾ. ಗಂಗೂಲಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದ ತಕ್ಷಣ ತನಿಖೆಗಾಗಿ ನೇಮಿಸಲಾಗಿದ್ದ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯು, ನಿವೃತ್ತ ನ್ಯಾಯಮೂರ್ತಿ ಅವರ ವರ್ತನೆ ‘ಅಸಭ್ಯವಾದದ್ದು ಮತ್ತು ಲೈಂಗಿಕ ಸ್ವರೂಪದ್ದು’ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.