ನವದೆಹಲಿ (ಪಿಟಿಐ, ಐಎಎನ್ಎಸ್): ಯಾವುದೇ ಪಕ್ಷಕ್ಕೆ ಬಹುಮತ ಇಲ್ಲದೆ ಅತಂತ್ರ ವಿಧಾನಸಭೆ ಸೃಷ್ಟಿಯಾಗಿರುವ ದೆಹಲಿಯಲ್ಲಿ ಹೊಸ ಸರ್ಕಾರ ರಚಿಸಲು ತೆರೆಮರೆಯ ಕಸರತ್ತು ನಡೆದಿದೆ. ಆಮ್ ಆದ್ಮಿ ಪಾರ್ಟಿಗೆ (ಎಎಪಿ) ಕಾಂಗ್ರೆಸ್ ಬೆಂಬಲ ಸೂಚಿಸಿದೆ. ಆದರೆ ಯಾವುದೇ ಪಕ್ಷದ ಬೆಂಬಲಕ್ಕೆ ಎಎಪಿ ನಿರಾಕರಿಸಿದೆ.
31 ಸ್ಥಾನ ಗಳಿಸಿದ ಅತಿದೊಡ್ಡ ಪಕ್ಷ ಬಿಜೆಪಿ ಸರ್ಕಾರ ರಚನೆಗೆ ನಿರಾಕರಿಸಿರುವುದರಿಂದ 2ನೇ ದೊಡ್ಡ ಪಕ್ಷ ಎಎಪಿಗೆ ಬೆಂಬಲ ಸೂಚಿಸಿ ಶುಕ್ರವಾರ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರಿಗೆ ಕಾಂಗ್ರೆಸ್ ಪತ್ರ ಸಲ್ಲಿಸಿದೆ. ಜನರ ಮೇಲೆ ಮತ್ತೆ ಚುನಾವಣೆ ಹೇರಿಕೆ ತಡೆಯಲು ಪಕ್ಷ ಈ ನಿರ್ಧಾರ ಕೈಗೊಂಡಿದೆ.
ಈ ಬೆಳವಣಿಗೆಯಿಂದಾಗಿ ಈವರೆಗೆ ಯಾವುದೇ ಪಕ್ಷದ ಬೆಂಬಲ ಕೇಳಲು ಹಿಂದೇಟು ಹಾಕಿದ್ದ ಎಎಪಿಯ ಹಿರಿಯ ನಾಯಕರು ಗೊಂದಲಕ್ಕೀಡಾಗಿ, ರಾತ್ರಿ ತುರ್ತು ಸಭೆ ಸೇರಿ ಚರ್ಚಿಸಿದರು. ನಂತರ ಕಾಂಗ್ರೆಸ್ ಬೆಂಬಲ ತಿರಸ್ಕರಿಸಲು ನಿರ್ಧರಿಸಿದರು. ಶನಿವಾರ ಜಂಗ್ ಅವರನ್ನು ಅರವಿಂದ್ ಕೇಜ್ರಿವಾಲ್ ನೇತೃತ್ವ ಎಎಪಿ ನಾಯಕರು ಭೇಟಿಯಾಗಿ ತೀರ್ಮಾನ ತಿಳಿಸಲಿದ್ದಾರೆ ಎಂದು ಪಕ್ಷ ಹೇಳಿದೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನು ಪಡೆದಿರುವ ಎಎಪಿಯ ಮುಖಂಡ ಯೋಗೇಂದ್ರ ಯಾದವ್, ‘ಸರ್ಕಾರ ರಚನೆಗೆ ಅಗತ್ಯ ಸ್ಥಾನಗಳನ್ನು ನಮ್ಮ ಪಕ್ಷ ಪಡೆದಿಲ್ಲ. ಹಾಗಾಗಿ ನಾವು ಸರ್ಕಾರ ರಚಿಸುವುದಿಲ್ಲ’ ಎಂದಿದ್ದಾರೆ.
ಒಟ್ಟು 70 ಸ್ಥಾನಗಳ ದೆಹಲಿ ವಿಧಾನಸಭೆಯಲ್ಲಿ ಬಹುಮತ ಸರ್ಕಾರ ರಚನೆಗೆ 36 ಶಾಸಕರ ಬೆಂಬಲ ಬೇಕಿದೆ. ಆದರೆ ಯಾವ ಪಕ್ಷವೂ ಇಷ್ಟು ಸ್ಥಾನ ಪಡೆದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.