ನವದೆಹಲಿ (ಪಿಟಿಐ): ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರ ಪ್ರಕರಣವು ತೀವ್ರ ಕಿರಿಕಿರಿ ಉಂಟು ಮಾಡುತ್ತಿದ್ದು, ಪ್ರಕರಣಕ್ಕೆ ಮುಕ್ತಾಯ ಹೇಳಲು ಅಮೆರಿಕ ರಾಜಕೀಯ ಪರಿಹಾರ ಕಂಡುಕೊಳ್ಳಬೇಕು ಎಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದರು.
ದೇವಯಾನಿ ವಿರುದ್ಧದ ವೀಸಾ ವಂಚನೆ ಆಪಾದನೆಯನ್ನು ನ್ಯಾಯಾಲಯ ತಳ್ಳಿ ಹಾಕಿದ ನಂತರ ಅಮೆರಿಕ ಸರ್ಕಾರವು ವಾಸ್ತವ ನೆಲೆಯಲ್ಲಿ ಚಿಂತಿಸಿ ಪ್ರಕರಣವನ್ನು ಮುಕ್ತಾಯಗೊಳಿಸಬೇಕು ಎಂದು ಸಲಹೆ ಮಾಡಿದರು.
‘ದೇವಯಾನಿ ಅವರನ್ನು ಬಂಧಿಸಿದ ಸಂದರ್ಭದಲ್ಲಿ ಭಾರತಕ್ಕೆ ತೀವ್ರ ಮುಜುಗರ ಉಂಟಾಗಿತ್ತು. ಆಗ ಪದೇ ಪದೇ ಹೇಳಿಕೆ ನೀಡಿ ಅಮೆರಿಕ ಅಧಿಕಾರಿಗಳು ತಪ್ಪು ಮಾಡಿದ್ದಾರೆ, ಇದರಿಂದ ಎರಡೂ ರಾಷ್ಟ್ರಗಳ ಸಂಬಂಧಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಹೇಳಿದ್ದೆ.
ಆದರೂ ಅಮೆರಿಕದ ಆಡಳಿತ ಏಕೆ ಪ್ರಕರಣವನ್ನು ಮುಕ್ತಾಯಗೊಳಿಸುತ್ತಿಲ್ಲ’ ಎಂಬುದು ಅರ್ಥವಾಗುತ್ತಿಲ್ಲ ಎಂದು ಖರ್ಷಿದ್ ಹೇಳಿದರು.
ಇಂತಹ ಘಟನೆಗಳು ನಡೆದಾಗ ನಾವು ಕಾಳಜಿ ವ್ಯಕ್ತಪಡಿಸದೆ ಇರಲು ಸಾಧ್ಯವಿಲ್ಲ. ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ಬರಬಾರದು ಎಂಬ ಕಾಳಜಿಯಿಂದ ತುಂಬಾ ಜಾಗರೂಕತೆಯಿಂದ ನಡೆದುಕೊಂಡಿರುವುದಾಗಿ ಅವರು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
ನ್ಯಾಯಾಲಯವು ವೀಸಾ ವಂಚನೆ ಆಪಾದನೆಯನ್ನು ತಳ್ಳಿ ಹಾಕಿದ ನಂತರ ಅಮೆರಿಕ ಸರ್ಕಾರವು ಪ್ರಕರಣಕ್ಕೆ ಮುಕ್ತಾಯ ಹೇಳಿದ್ದರೆ ಕಿರಿಕಿರಿ ತಪ್ಪುತ್ತಿತ್ತು. ಆದರೆ ಅಮೆರಿಕ ಮತ್ತೊಂದು ಪ್ರಕರಣ ದಾಖಲಿಸುವ ಮೂಲಕ ಸಮಸ್ಯೆಯನ್ನು ಜೀವಂತವಾಗಿ ಇರಿಸಲು ಬಯಸಿದೆ. ಇದಕ್ಕೆ ಅವರೇ (ಅಮೆರಿಕ ಅಧಿಕಾರಿಗಳು) ರಾಜಕೀಯ ಪರಿಹಾರ ಕಂಡುಕೊಳ್ಳುವುದು ಒಳಿತು ಎಂದು ಸಚಿವರು ತಿಳಿಸಿದರು.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಅವರ ಜತೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ರಾಜತಾಂತ್ರಿಕ ಅಧಿಕಾರಿಗಳ ವಿನಾಯ್ತಿ ಮತ್ತು ವಿಶೇಷ ಸೌಲತ್ತುಗಳನ್ನು ಇನ್ನು ಮುಂದೆ ಗೌರವಿಸಬೇಕು ಮತ್ತು ಈ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ಆಗಬೇಕು ಎಂದು ನಿರ್ಧರಿಸಲಾಗಿದೆ. ಆದ್ದರಿಂದ ದೇವಯಾನಿ ಪ್ರಕರಣಕ್ಕೆ ಅಂತ್ಯ ಹೇಳುವುದು ಒಳಿತು ಎಂದು ಖುರ್ಷಿದ್ ಹೇಳಿದರು.
ಅಮೆರಿಕದ ಕ್ರಮ ಸಮರ್ಥನೀಯವಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಎರಡನೇ ಪ್ರಕರಣ ದಾಖಲಿಸುವ ಮೂಲಕ ಅನಗತ್ಯ ವಿವಾದಕ್ಕೆ ಆಸ್ಪದ ಉಂಟು ಮಾಡಲಾಗಿದೆ ಹಾಗೂ ಉಭಯ ದೇಶಗಳ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದನ್ನು ಅಮೆರಿಕಕ್ಕೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.