ADVERTISEMENT

ದೇವಯಾನಿ ಪ್ರಕರಣದಿಂದ ಕಿರಿಕಿರಿ

ಅಮೆರಿಕ ಕ್ರಮದ ಬಗ್ಗೆ ಖುರ್ಷಿದ್‌ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2014, 19:30 IST
Last Updated 16 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರ ಪ್ರಕ­ರಣವು ತೀವ್ರ ಕಿರಿಕಿರಿ ಉಂಟು ಮಾಡುತ್ತಿದ್ದು,  ಪ್ರಕರಣಕ್ಕೆ ಮುಕ್ತಾಯ ಹೇಳಲು ಅಮೆರಿಕ ರಾಜಕೀಯ ಪರಿ­ಹಾರ ಕಂಡುಕೊಳ್ಳಬೇಕು ಎಂದು ವಿದೇ­ಶಾಂಗ ಸಚಿವ ಸಲ್ಮಾನ್‌ ಖುರ್ಷಿದ್‌ ಹೇಳಿದರು.

ದೇವಯಾನಿ  ವಿರುದ್ಧದ ವೀಸಾ ವಂಚನೆ ಆಪಾದನೆಯನ್ನು ನ್ಯಾಯಾ­ಲಯ ತಳ್ಳಿ ಹಾಕಿದ ನಂತರ ಅಮೆರಿಕ ಸರ್ಕಾರವು ವಾಸ್ತವ ನೆಲೆಯಲ್ಲಿ ಚಿಂತಿಸಿ ಪ್ರಕರಣವನ್ನು ಮುಕ್ತಾಯಗೊಳಿಸಬೇಕು ಎಂದು ಸಲಹೆ ಮಾಡಿದರು.

‘ದೇವಯಾನಿ  ಅವರನ್ನು ಬಂಧಿಸಿದ ಸಂದರ್ಭದಲ್ಲಿ ಭಾರತಕ್ಕೆ ತೀವ್ರ ಮುಜುಗರ ಉಂಟಾಗಿತ್ತು. ಆಗ ಪದೇ ಪದೇ ಹೇಳಿಕೆ ನೀಡಿ ಅಮೆರಿಕ ಅಧಿಕಾ­ರಿಗಳು ತಪ್ಪು ಮಾಡಿದ್ದಾರೆ, ಇದರಿಂದ ಎರಡೂ ರಾಷ್ಟ್ರಗಳ ಸಂಬಂಧಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಹೇಳಿದ್ದೆ.

ಆದರೂ ಅಮೆರಿಕದ ಆಡಳಿತ ಏಕೆ ಪ್ರಕರಣವನ್ನು ಮುಕ್ತಾಯಗೊಳಿಸುತ್ತಿಲ್ಲ’ ಎಂಬುದು ಅರ್ಥವಾಗುತ್ತಿಲ್ಲ ಎಂದು ಖರ್ಷಿದ್‌ ಹೇಳಿದರು.
ಇಂತಹ ಘಟನೆಗಳು ನಡೆದಾಗ ನಾವು ಕಾಳಜಿ ವ್ಯಕ್ತಪಡಿಸದೆ ಇರಲು ಸಾಧ್ಯ­ವಿಲ್ಲ. ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ಬರಬಾರದು ಎಂಬ ಕಾಳಜಿಯಿಂದ ತುಂಬಾ ಜಾಗರೂಕತೆಯಿಂದ ನಡೆದು­ಕೊಂಡಿರುವುದಾಗಿ ಅವರು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ನ್ಯಾಯಾಲಯವು ವೀಸಾ ವಂಚನೆ ಆಪಾದನೆಯನ್ನು ತಳ್ಳಿ ಹಾಕಿದ ನಂತರ ಅಮೆರಿಕ ಸರ್ಕಾರವು ಪ್ರಕರಣಕ್ಕೆ ಮುಕ್ತಾಯ ಹೇಳಿದ್ದರೆ ಕಿರಿಕಿರಿ ತಪ್ಪು­ತ್ತಿತ್ತು. ಆದರೆ ಅಮೆರಿಕ ಮತ್ತೊಂದು ಪ್ರಕರಣ ದಾಖಲಿಸುವ ಮೂಲಕ ಸಮಸ್ಯೆಯನ್ನು ಜೀವಂತವಾಗಿ ಇರಿಸಲು ಬಯಸಿದೆ. ಇದಕ್ಕೆ ಅವರೇ (ಅಮೆರಿಕ ಅಧಿಕಾರಿಗಳು) ರಾಜಕೀಯ ಪರಿಹಾರ ಕಂಡುಕೊಳ್ಳುವುದು ಒಳಿತು ಎಂದು ಸಚಿವರು ತಿಳಿಸಿದರು.

ಅಮೆರಿಕದ  ವಿದೇಶಾಂಗ ಕಾರ್ಯ­ದರ್ಶಿ ಜಾನ್‌ ಕೆರಿ ಅವರ ಜತೆ ಮಾತು­ಕತೆ ನಡೆಸಿದ ಸಂದರ್ಭದಲ್ಲಿ ರಾಜ­ತಾಂತ್ರಿಕ ಅಧಿಕಾರಿಗಳ ವಿನಾಯ್ತಿ ಮತ್ತು ವಿಶೇಷ ಸೌಲತ್ತುಗಳನ್ನು ಇನ್ನು ಮುಂದೆ ಗೌರವಿಸಬೇಕು ಮತ್ತು ಈ ಬಗ್ಗೆ ಅಧಿಕಾ­ರಿಗಳ ಮಟ್ಟದಲ್ಲಿ ಚರ್ಚೆ ಆಗಬೇಕು ಎಂದು ನಿರ್ಧರಿಸಲಾಗಿದೆ. ಆದ್ದರಿಂದ ದೇವಯಾನಿ ಪ್ರಕರಣಕ್ಕೆ ಅಂತ್ಯ ಹೇಳುವುದು ಒಳಿತು ಎಂದು ಖುರ್ಷಿದ್‌ ಹೇಳಿದರು.

ಅಮೆರಿಕದ ಕ್ರಮ ಸಮರ್ಥ­ನೀ­ಯವಲ್ಲ ಎಂಬುದನ್ನು  ಸ್ಪಷ್ಟಪ­ಡಿ­ಸಲಾಗಿದೆ. ಎರಡನೇ ಪ್ರಕರಣ ದಾಖ­ಲಿಸುವ ಮೂಲಕ ಅನಗತ್ಯ ವಿವಾದಕ್ಕೆ ಆಸ್ಪದ ಉಂಟು ಮಾಡಲಾಗಿದೆ ಹಾಗೂ ಉಭಯ ದೇಶಗಳ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದನ್ನು ಅಮೆರಿಕಕ್ಕೆ ಮನವರಿಕೆ  ಮಾಡಿಕೊಡಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.