ನವದೆಹಲಿ (ಪಿಟಿಐ): ಅಮೆರಿಕ ಮತ್ತು ಭಾರತದ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಹುಟ್ಟುಹಾಕಿದ್ದ ಹಿರಿಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರ ವಿರುದ್ಧದ ವೀಸಾ ವಂಚನೆ ಆರೋಪವನ್ನು ಅಮೆರಿಕದ ಸ್ಥಳೀಯ ನ್ಯಾಯಾಲಯವು ವಜಾಗೊಳಿಸಿದ್ದು, ಈ ಕ್ರಮವನ್ನು ಭಾರತ ಗುರುವಾರ ಸ್ವಾಗತಿಸಿದೆ.
`ಜನವರಿ 9 ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಆದೇಶವನ್ನು ನಾವು ನೋಡಿದ್ದೇವೆ. ಆದದ್ದೆಲ್ಲವೂ ಒಳ್ಳೆಯದೇ ಆಗಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ತಿಳಿಸಿದರು.
ನ್ಯಾಯಾಲಯದ ಆದೇಶ ಕುರಿತು ಪ್ರತಿಕ್ರಿಯಿಸಿರುವ ದೇವಯಾನಿ ಅವರ ತಂದೆ ಉತ್ತಮ್ ಖೋಬ್ರಾಗಡೆ ಅವರು `ದೇವಯಾನಿ ವಿರುದ್ಧ ಸುಳ್ಳು ಆರೋಪ ಮಾಡುವುದರೊಂದಿಗೆ ಅವಳನ್ನು ಬಂಧಿಸಲು ಅವರು ಪ್ರಯತ್ನಿಸಿದರು. ಈ ವಿಷಯದಲ್ಲಿ ಸಹಕಾರ ಮತ್ತು ಸಹಾಯ ನೀಡಿದ ಭಾರತ ಸರ್ಕಾರಕ್ಕೆ ಮತ್ತು ದೇಶದ ಜನತೆಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಇನ್ನು ಮುಂದೆ ಅವಳು ಸಂಪೂರ್ಣ ರಾಜತಾಂತ್ರಿಕ ವಿನಾಯಿತಿಯೊಂದಿಗೆ ಅಮೆರಿಕಕ್ಕೆ ಮರಳಬಹುದು' ಎಂದು ಹೇಳಿದರು.
ದೇವಯಾನಿ ಪ್ರಕರಣದ ವಿಚಾರಣೆ ನಡೆಸಿದ ಅಮೆರಿಕ ಜಿಲ್ಲಾ ನ್ಯಾಯಾಧೀಶೆ ಶಿರಾ ಶ್ಚೆಇಂಡ್ಲಿನ್ ಅವರು ತಮ್ಮ 14 ಪುಟಗಳ ತೀರ್ಪಿನಲ್ಲಿ `ಈ ಪ್ರಕರಣವು ನಿರ್ವಿವಾದವಾಗಿದೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.