ನವದೆಹಲಿ (ಪಿಟಿಐ): 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿ ದಾಖಲಿಸಿದ ನಂತರವೇ ಕಲೈಞ್ಞರ್ ಟಿವಿ ಚಾನೆಲ್ ಕಂಪೆನಿಗೆ ಡಿಬಿ ರಿಯಾಲಿಟಿ ಕಂಪೆನಿಯಿಂದ 200 ಕೋಟಿ ರೂಪಾಯಿಗಳು ಸಂದಾಯವಾದ ಬಗ್ಗೆ ದಾಖಲೆ ಸೃಷ್ಟಿಸಲಾಗಿದೆ ಎಂದು ಸಿಬಿಐ ಹೇಳಿದೆ.ಡಿಬಿ ರಿಯಾಲಿಟಿ ಕಂಪೆನಿಯ ಲೆಕ್ಕಿಗ ನೀಡಿದ ಹೇಳಿಕೆಯ ಆಧಾರದ ಮೇಲೆ ಸಿಬಿಐ ಈ ಪ್ರತಿಪಾದನೆ ಮಾಡಿದೆ.
ಕೆಲವು ಅನಾಮಧೇಯ ವ್ಯಕ್ತಿಗಳು ದೂರಸಂಪರ್ಕ ಇಲಾಖೆಯಲ್ಲಿನ ಅಕ್ರಮಗಳ ಬಗ್ಗೆ ನೀಡಲಾದ ದೂರುಗಳನ್ನು ಅನುಸರಿಸಿ ಸಿಬಿಐ ತನ್ನ ಪ್ರಥಮ ದೋಷಾರೋಪ ಪಟ್ಟಿಯನ್ನು 2009ರ ಅಕ್ಟೋಬರ್ 21ರಂದು ದಾಖಲಿಸಿತ್ತು. ಈ ದೋಷಾರೋಪ ದಾಖಲಿಸಿದ ನಂತರ ಕಲೈಞ್ಞರ್ ಟಿವಿ ಕಂಪೆನಿಗೆ ಹರಿದು ಬಂದ 200 ಕೋಟಿ ರೂಪಾಯಿಗಳ ಬಗ್ಗೆ ಒಪ್ಪಂದಗಳು ಏರ್ಪಟ್ಟಿವೆ ಎಂದು ಸಿಬಿಐ ತಿಳಿಸಿದೆ.
ತನ್ನ ಎರಡನೇ ದೋಷಾರೋಪ ಪಟ್ಟಿಯಲ್ಲಿ ಸಿಬಿಐ ಸ್ವಾನ್ ಟೆಲಿಕಾಂ ಹಾಗೂ ಡೈನಮಿಕ್ಸ್ ರಿಯಾಲಿಟಿ ಪ್ರಮೋಟರ್ಸ್ನ ಶಾಹೀದ್ ಬಲ್ವಾ ಮತ್ತು ವಿನೋದ್ ಗೋಯೆಂಕಾ ಅವರಿಂದ ಕಲೈಞ್ಞರ್ ಟಿವಿ ಕಂಪೆನಿಗೆ ಬೃಹತ್ ಮೊತ್ತದ ಹಣ ಬಳಸುದಾರಿಯ ಮುಖಾಂತರ ಹರಿದು ಬಂದಿದೆ ಎಂಬುದನ್ನು ಸ್ಪಷ್ಟಪಡಿಸಿದೆ.
ಡಿಬಿ ರಿಯಾಲಿಟಿ ಕಂಪೆನಿಯಿಂದ ಕಲೈಞ್ಞರ್ ಟಿವಿ ಕಂಪೆನಿಗೆ 2008ರ ಡಿಸೆಂಬರ್ 23ರಿಂದ 2009ರ ಆಗಸ್ಟ್ 7ರ ನಡುವೆ 200 ಕೋಟಿ ರೂಪಾಯಿ ಹರಿದು ಬಂದಿದೆ ಎಂಬುದು ಸಿಬಿಐನ ಹೇಳಿಕೆ.
ಬಚ್ಚಾ ಮತ್ತು ಡಿಬಿ ಗ್ರೂಪ್ ನಡುವೆ ಸಂಪರ್ಕ
ನವದೆಹಲಿ (ಪಿಟಿಐ): 2 ಜಿ ತರಂಗಾಂತರ ಹಗರಣದ ಪ್ರಮುಖ ಆರೋಪಿ ಮಾಜಿ ಸಚಿವ ಎ. ರಾಜಾ ಅವರ ನಿಕಟವರ್ತಿ ಸಾದಿಕ್ ಬಚ್ಚಾ ನಡೆಸುತ್ತಿದ್ದ ಗ್ರೀನ್ ಹೌಸ್ ಪ್ರಮೋಟರ್ಸ್ ಸಂಸ್ಥೆಗೂ ಮತ್ತು ಹಗರಣದ ಇತರ ಆರೋಪಿಗಳಾದ ಡಿಬಿ ಗ್ರೂಪ್ನ ಶಾಹಿದ್ ಬಲ್ವಾ ಹಾಗೂ ವಿನೋದ್ ಗೋಯೆಂಕ ಅವರಿಗೂ ಸಂಪರ್ಕವಿತ್ತು ಎಂದು ಸಿಬಿಐ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದೆ.
ಗ್ರೀನ್ ಹೌಸ್ ಪ್ರಮೋಟರ್ಸ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಬಚ್ಚಾ 40 ಉದ್ಯೋಗಿಗಳನ್ನು ಬಲ್ವಾನ ಸಲಹೆ ಮೇರೆಗೆ ಕೆಲಸದಿಂದ ವಜಾಗೊಳಿಸಿದ್ದರು ಎಂದು ಸಿಬಿಐ ಹೇಳಿಕೆ ನೀಡಿದೆ.ಸಿಬಿಐನಿಂದವಿಚಾರಣೆಗೊಳಪಟ್ಟಿದ್ದ ಬಚ್ಚಾ ಮಾರ್ಚ್ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಚೆನ್ನೈಯಲ್ಲಿ ಸಾವಿಗೀಡಾಗಿದ್ದರು.
ಜಂಟಿ ಸಹಯೋಗದ ಯೋಜನೆ: ಡಿಬಿ ಗ್ರೂಪ್ನೊಂದಿಗೆ ಗ್ರೀನ್ಹೌಸ್ ಪ್ರಮೋಟರ್ಸ್ ಸಂಪರ್ಕ ಹೊಂದಿದ್ದು, ಉದ್ದಿಮೆ ಸಹಭಾಗಿತ್ವ ಹೊಂದುವ ಅಥವಾ ಬೇರೆ ಯಾವುದೋ ಉದ್ದೇಶದಿಂದ ಕಂಪೆನಿಯ ಉದ್ಯೋಗಿಗಳನ್ನು ತೆಗೆದುಹಾಕಲಾಗಿತ್ತು ಎಂದು ಬಚ್ಚಾ ಅವರ ಆಪ್ತಸಹಾಯಕ ಕೆಲ್ವಿನ್ ಅಮೃತ್ರಾಜ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಗ್ರೀನ್ಹೌಸ್ ಪ್ರಮೋಟರ್ಸ್ಗೆ 2008ರಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಡಿಬಿ ಗ್ರೂಪ್ ಸಂದರ್ಶನ ನಡೆಸಿತ್ತು. ಅದೇ ರೀತಿ ಸುಮಾರು 40 ಉದ್ಯೋಗಿಗಳನ್ನು ಅದರ ಶಿಫಾರಸಿನ ಮೇಲೆಯೇ ತೆಗೆದುಹಾಕಲಾಗಿದೆ.
ಇದನ್ನು ಎರಡೂ ಕಂಪೆನಿಗಳ ನಡುವೆ ಒಪ್ಪಂದ ಮಾಡಿಕೊಳ್ಳುವ ಅಥವಾ ಬೇರೆ ಉದ್ದೇಶದಿಂದ ಮಾಡಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಡಿಬಿ ಗ್ರೂಪ್ನ ಎಟೆರ್ನಾ ಡೆವಲಪರ್ಸ್ ಕಂಪೆನಿಯಿಂದ 1.25 ಕೋಟಿ ರೂ ಹಣ ಗ್ರೀನ್ಹೌಸ್ಗೆ ವರ್ಗಾವಣೆಯಾಗಿತ್ತು. ಬಳಿಕ ಅದರ ಸ್ವಲ್ಪ ಮೊತ್ತವನ್ನು ಅದಕ್ಕೆ ಹಿಂದಿರುಗಿಸಲಾಗಿತ್ತು.
ಎರಡೂ ಕಂಪೆನಿಗಳ ನಡುವೆ ವ್ಯವಹಾರ ನಡೆದಿತ್ತು ಎಂದು ತಿಳಿಸಿದರು.ಬಚ್ಚಾ ಅವರಿಗೆ ಆಪ್ತ ಕಾರ್ಯದರ್ಶಿಯಾಗಿ ಕಂಪೆನಿ ಸೇರಿದ್ದು, ಬಳಿಕ ಕಂಪೆನಿ ಮತ್ತು ಉದ್ಯಮಿಗಳ ನಡುವೆ ವ್ಯವಹಾರಗಳನ್ನು ಏರ್ಪಡಿಸುವ ವ್ಯವಹಾರ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದುದಾಗಿ ಅಮೃತ್ರಾಜ್ ಸಿಬಿಐಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.