ರಾಯಪುರ (ಪಿಟಿಐ): ಛತ್ತೀಸಗಡದ ಧಾಂತಾರಿ ಜಿಲ್ಲೆಯಲ್ಲಿ ಕೇಂದ್ರ ಮೀಸಲು ಪಡೆಯವರು ನಕ್ಸಲರ ಶೋಧನೆ ನಡೆಸುತ್ತಿದ್ದಾಗ ನಡೆದ ಗುಂಡಿನ ಚಕಮಕಿಯಲ್ಲಿ ಯೋಧರೊಬ್ಬರು ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಎಸ್.ಕೆ.ದಾಸ್ ಮೃತರು. ಇವರು ಸಿಆರ್ಪಿಎಫ್ 211ನೇ ಬೆಟಾಲಿಯನ್ನಲ್ಲಿ ಸಹಾಯಕ ಕಮಾಂಡರ್ ಆಗಿದ್ದರು. ಇಲ್ಲಿನ ಖಲ್ಲಾರಿ ಗ್ರಾಮದ ಬಳಿಯ ಅರಣ್ಯದಲ್ಲಿ ಈ ಗುಂಡಿನ ಚಕಮಕಿ ನಡೆದಿದೆ. ನಂತರ ನಕ್ಸಲರೆಲ್ಲರು ಪರಾರಿಯಾದರು ಎಂದು ಅಧಿಕಾರಿಗಳು ತಿಳಿಸಿದರು.
ಭದ್ರತಾ ಅಧಿಕಾರಿ ಸಾವು
ಛತ್ತೀಸಗಡದ ಬಸ್ತರ್ ವಲಯದಲ್ಲಿ ಕಳೆದ ವಾರ ಮಾವೊವಾದಿಗಳು ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದ ಭದ್ರತಾ ಅಧಿಕಾರಿ ಇಲ್ಲಿನ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಇದರಿಂದ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 28ಕ್ಕೆ ಏರಿದೆ.
ಸಿಯಾರಾಂ ಸಿಂಗ್ ಮೃತರು. ಇವರು ದಾಳಿಯಲ್ಲಿ ಹತ್ಯೆಯಾದ ಕಾಂಗ್ರೆಸ್ನ ಮುಖಂಡ ಮಹೇಂದ್ರ ಕರ್ಮ ಅವರ ಭದ್ರತಾ ಅಧಿಕಾರಿಯಾಗಿದ್ದರು. ಬಿಹಾರ ಮೂಲದ ಸಿಯಾರಾಂ ಅರೆಸೇನಾ ಪಡೆಯ ಯೋಧರಾಗಿದ್ದರು.
ಶುಕ್ಲಾ ಆರೋಗ್ಯ ಸ್ಥಿರ
ಗುಡಗಾಂವ್ (ಐಎಎನ್ಎಸ್):`ಮಾವೊವಾದಿಗಳ ದಾಳಿಯಿಂದ ಗಾಯಗೊಂಡ ಕಾಂಗ್ರೆಸ್ ಮುಖಂಡ ವಿ.ಸಿ. ಶುಕ್ಲಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆಯಾದರೂ, ಅವರು ಇನ್ನೂ ವಿಷಮಾವಸ್ಥೆಯಲ್ಲೇ ಇದ್ದಾರೆ' ಎಂದು ವೈದ್ಯರು ತಿಳಿಸಿದ್ದಾರೆ.
ಯೋಧ ಆತ್ಮಹತ್ಯೆ
ಮಲ್ಕಾನ್ಗಿರಿ, ಒಡಿಶಾ (ಪಿಟಿಐ): ಒಡಿಶಾದ ನಕ್ಸಲ್ ನಿಗ್ರಹ ಪಡೆಯ ವಿಶೇಷ ಕಾರ್ಯಾಚರಣೆ ತಂಡದ (ಎಸ್ಒಜಿ) ಯೋಧರೊಬ್ಬರು ಭದ್ರತಾ ಶಿಬಿರದಲ್ಲಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಂಧಮಾಲ್ ಜಿಲ್ಲೆಯ ಸೂರ್ಯನಾರಾಯಣ್ ಸಾಹು (27) ಮೃತರು. ಕಾಳಿಮೇಲಾ ಪ್ರದೇಶದ ಪೊಟೆರು ಶಿಬಿರದಲ್ಲಿದ್ದ ಸಾಹು ತಮ್ಮ ಸೇವಾ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾರೆ.ಆತ್ಮಹತ್ಯೆಗೆ ಕಾರಣ ತಿಳಿದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.