ADVERTISEMENT

ನಗದು ರಹಿತ ದಿನ, ಕರಾಳದಿನ, ಕಪ್ಪುಹಣ ವಿರೋಧಿ ದಿನ: ನವೆಂಬರ್ 8 'ವಿಶೇಷ' ಯಾಕೆ?

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 10:07 IST
Last Updated 8 ನವೆಂಬರ್ 2018, 10:07 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ನರೇಂದ್ರ ಮೋದಿ ಸರ್ಕಾರ ₹500 ಮತ್ತು ₹1,000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ ನವೆಂಬರ್ 8ನೇ ತಾರೀಖಿಗೆ ಎರಡು ವರ್ಷ. ಈ ದಿನವನ್ನು ವಿಪಕ್ಷ ಕಾಂಗ್ರೆಸ್ ಕರಾಳ ದಿನವಾಗಿ ಆಚರಿಸಲು ಒಂದು ವರ್ಷ ಪೂರೈಸಿದಾಗ(2017ರ ನ.8ಕ್ಕೆ)ಕರೆ ನೀಡಿತ್ತು. ದೇಶದ ಶೇ. 86 ಕರೆನ್ಸಿಯನ್ನು ರದ್ದು ಮಾಡಿದ್ದು ಆರ್ಥಿಕ ವ್ಯವಸ್ಥೆ ಮೇಲೆ ತೀವ್ರ ಪರಿಣಾಮ ನೀಡಿತ್ತು. ಆದಾಗ್ಯೂ, ನೋಟು ರದ್ದತಿ ನಿರ್ಧಾರದ ಒಂದನೇ ವರ್ಷವನ್ನು ಕಪ್ಪುಹಣ ನಿಗ್ರಹ ದಿನವನ್ನಾಗಿ ಆಚರಿಸುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದರು.

ವಿಪಕ್ಷ ಕಾಂಗ್ರೆಸ್ 2017ರ ನವೆಂಬರ್ 8ನೇ ತಾರೀಖನ್ನು ಕರಾಳ ದಿನವನ್ನಾಗಿಸಿದರೆ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ನೋಟು ರದ್ದತಿಯ ನಿರ್ಧಾರ ಯಶಸ್ವಿಯಾಗಿದೆ ಎಂದು ಕಪ್ಪು ಹಣ ನಿಗ್ರಹ ದಿನವನ್ನಾಗಿ ಆಚರಿಸಿತ್ತು. ಅಂದಹಾಗೆ ನವೆಂಬರ್ 8 ವಿಶೇಷ ದಿನ ಯಾಕೆ ಎಂಬುದರ ಬಗ್ಗೆ ಸ್ಕ್ರಾಲ್ ಡಾಟ್ ಇನ್ ನಲ್ಲಿ 2017ರಲ್ಲಿ ಪ್ರಕಟವಾಗಿದ್ದ ವರದಿ ಇದು. ನೋಟು ರದ್ದಾಗಿ ಇಂದಿಗೆ ಎರಡನೇ ವರ್ಷ ಪೂರೈಸಿದ ಸಂದರ್ಭದಲ್ಲಿ ಓದುಗರಿಗಾಗಿ ‘ಪ್ರಜಾವಾಣಿ’ ಮರು ಪ್ರಕಟ ಮಾಡುತ್ತಿದೆ.

ಭ್ರಷ್ಟಾಚಾರ ನಿಗ್ರಹ ದಿನ: ಭ್ರಷ್ಟಾಚಾರ ಮತ್ತು ಕಪ್ಪು ಹಣ ನಿಗ್ರಹಕ್ಕಾಗಿ ನೋಟು ರದ್ದು ಮಾಡಲಾಗುತ್ತಿದೆ ಎಂದು ಕಳೆದ ವರ್ಷ ನೋಟು ರದ್ದತಿ ನಿರ್ಧಾರ ಘೋಷಿಸುವ ವೇಳೆ ಪ್ರಧಾನಿ ಮೋದಿ ಹೇಳಿದ್ದರು. ನಕಲಿ ನೋಟುಗಳ ವಿರುದ್ಧಹೋರಾಟವೂ ಆಗಿತ್ತು ನೋಟು ರದ್ದತಿ. ರದ್ದಾದ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ವಾಪಸ್ ಪಡೆದುಕೊಂಡು ಅದರ ಬದಲಿಗೆ ಹೊಸ ನೋಟನ್ನು ನೀಡಲಾಗಿತ್ತು. ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡುವ ಮೂಲಕ ಕಪ್ಪು ಹಣ ಬೆಳಕಿಗೆ ಬರುತ್ತದೆಎಂದು ಸರ್ಕಾರ ಹೇಳಿತ್ತು.

ADVERTISEMENT

ನಗದು ರಹಿತ ದಿನ: ಗರಿಷ್ಠ ಮೌಲ್ಯದ ನೋಟುಗಳನ್ನು ರದ್ದು ಮಾಡಿದ ನಂತರ ದೇಶದ ಜನತೆ ನಗದು ಕೊರತೆ ಅನುಭವಿಸಿದ್ದರು. ಆ ಹೊತ್ತಿಗೆ ನಗದು ರಹಿತ ವಹಿವಾಟಿಗೆ ಪ್ರೋತ್ಸಾಹ ನೀಡುವಂತೆ ಮೋದಿ ಕರೆ ನೀಡಿದ್ದರು. ಆನ್ ಲೈನ್ ವಹಿವಾಟುಗಳು ಹೆಚ್ಚಾಗಿದ್ದು ನೋಟು ರದ್ದತಿಯ ನಂತರವೇ ಆಗಿತ್ತು.

ಉಳಿತಾಯ ದಿನ: ನೋಟು ರದ್ದತಿ ನಿರ್ಧಾರ ಬುಡಮೇಲು ಆಗುತ್ತಿದ್ದಂತೆ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನೋಟು ರದ್ದತಿಗೂ ಭ್ರಷ್ಟಾಚಾರಕ್ಕೂ ಏನೂಸಂಬಂಧವಿಲ್ಲ ಎಂದು ಹೇಳಿದರು. ಜನರು ಹಣ ಉಳಿತಾಯ ಮಾಡಬೇಕು, ಹಾಗೆ ಉಳಿತಾಯ ಮಾಡಿದ ಹಣವನ್ನು ಬ್ಯಾಂಕ್‍‌ನಲ್ಲಿಡಿ ಎಂದು ಸರ್ಕಾರ ಹೇಳಿತು. ಆದಾಗ್ಯೂ, ತಮ್ಮ ಹಣವನ್ನು ಯಾವ ರೀತಿ ಉಳಿತಾಯ ಮಾಡಬೇಕು ಎಂದು ಸರ್ಕಾರ ಯಾಕೆ ನಿರ್ಧರಿಸಬೇಕು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಕಪ್ಪ ಹಣ ನಿಗ್ರಹ ದಿನ: ನೋಟು ರದ್ದತಿ ನಿರ್ಧಾರ ಘೋಷಿಸಿದ ಕೂಡಲೇ ಕಪ್ಪು ಹಣ ಎಂಬುದು ಮಾನವೀಯತೆಯ ವಿರುದ್ಧ ಅಪರಾಧ ಎಂದು ಸರ್ಕಾರ ಬಣ್ಣಿಸಿತು. ಇದೊಂದು ಅಸಂಬದ್ಧ ನಿರ್ಧಾರ ಎಂದು ಹೇಳಿದವರನ್ನು ಬಿಜೆಪಿಯ ಡಿಜಿಟಲ್ ಸೈನ್ಯ ಕಪ್ಪು ಹಣ ಹೊಂದಿದವರಿಗೆ ಎರಡು ಯೋಜನೆಗಳನ್ನು ಘೋಷಿಸಿ ಅವರನ್ನು ಶುದ್ಧಹಸ್ತರನ್ನಾಗಿ ಮಾಡಿಸಿತು.

2016ರ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯಡಿ ಕಪ್ಪು ಹಣವನ್ನು ಘೋಷಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ತಮ್ಮ ಅಘೋಷಿತ ಕಪ್ಪು ಹಣದ ಆದಾಯದ ಮೇಲೆ ಶೇ. 50 ತೆರಿಗೆ ಪಾವತಿಸಬೇಕಾಗುವುದು. ಅಲ್ಲದೆ ಹೆಚ್ಚುವರಿಯಾಗಿ ಶೇ.10ರ ದಂಡ ಮತ್ತು ಶೇ.33ರ ಪ್ರಮಾಣದಲ್ಲಿ ಪಿಎಂಜಿಕೆ ಸೆಸ್‌ (ಎಂದರೆ ಇದು ಶೇ.30ರ ಮೇಲಿನ ಶೇ.33 ಪ್ರಮಾಣ) ಪಾವತಿ ಮಾಡಬೇಕೆಂದು ಹೇಳಿ ಸರ್ಕಾರ ಕಪ್ಪು ಹಣವನ್ನು ಬಿಳಿ ಮಾಡಲು ಅವಕಾಶ ನೀಡಿತ್ತು.

ಉಗ್ರ ನಿಗ್ರಹ, ಮಾದಕ ವಸ್ತು, ಮಾನವ ಸಾಗಾಣಿಕೆ, ಕಲ್ಲು ತೂರಾಟ ವಿರೋಧಿ ದಿನ: ಡಿಸೆಂಬರ್ 2016ರಂದು ಭಾಷಣ ಮಾಡಿದ ನರೇಂದ್ರ ಮೋದಿ ನೋಟು ರದ್ದತಿಯಿಂದಾಗಿ ಭಯೋತ್ಪಾದನೆ, ಮಾದಕ ವಸ್ತು, ಮಾನವ ಸಾಗಾಣಿಕೆ ಮತ್ತು ನಕಲಿ ನೋಟು ಜಾಲ ನಿರ್ನಾಮವಾಗಿದೆ ಎಂದಿದ್ದರು. ನೋಟು ರದ್ದತಿಯಿಂದಾಗಿ ಕಾಶ್ಮೀರದಲ್ಲಿ ಕಲ್ಲು ತೂರಾಟವೂ ಕಡಿಮೆಯಾಗಿದೆ ಎಂದಿದ್ದರು ಜೇಟ್ಲಿ. ಆದರೆ ಯಾವ ಕಾರ್ಯಗಳು ನಿರ್ನಾಮವಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಬಿಜೆಪಿ ಕೈಯಲ್ಲಿಲ್ಲ. ಈಗಲೂ ಕಾಶ್ಮೀರದಲ್ಲಿ ಕಲ್ಲು ತೂರಾಟ ಮತ್ತು ಭಯೋತ್ಪಾದನಾ ಕೃತ್ಯಗಳು ನಡೆಯುತ್ತಲೇ ಇದೆ.

ಮೋದಿ ವಿರೋಧಿ ದಿನದ ವಿರೋಧಿ ದಿನ: ನೋಟು ರದ್ದತಿ ನಿರ್ಧಾರ ಘೋಷಿಸಿದ ನಂತರ ಕೆಲವೊಂದು ಶಕ್ತಿಗಳು ನನ್ನನ್ನು ಬದುಕಲು ಬಿಡುವುದಿಲ್ಲ ಎಂದು ಮೋದಿ ಹೇಳಿದ್ದರು. ನೋಟು ರದ್ದತಿಯಿಂದಾಗಿ ಜನರು ಕಷ್ಟ ಅನುಭವಿಸುತ್ತಿದ್ದಾರೆ ಎಂದು ಗೊತ್ತು, 50 ದಿನಗಳ ಅವಧಿ ಕೊಡಿ ಎಲ್ಲವೂ ಸರಿಯಾಗುತ್ತದೆ ಎಂದಿದ್ದರು ಮೋದಿ. ಆದರೆ ನೋಟು ರದ್ದತಿಯಾಗಿ 365 ದಿನಗಳ ಕಳೆದರೂ ಜನರ ಕಷ್ಟ ಇನ್ನೂಮುಗಿದಿಲ್ಲ ಎಂದು ಅಂದು ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.