ADVERTISEMENT

ನಗರ ಬಡವರಿಗಾಗಿ 15ಲಕ್ಷಕ್ಕೂ ಅಧಿಕ ಮನೆ ನಿರ್ಮಾಣ: ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 12:30 IST
Last Updated 14 ಸೆಪ್ಟೆಂಬರ್ 2013, 12:30 IST

ಚಂಡೀಗಢ (ಪಿಟಿಐ): ತೀವ್ರತರ ನಗರಿಕರಣವೇ ನಗರಗಳಲ್ಲಿ ಕೊಳೆಗೇರಿ ಬೆಳವಣಿಗೆಗೆ ಕಾರಣ ಎಂದು ಶನಿವಾರ ಅಭಿಪ್ರಾಯ ಪಟ್ಟಿರುವ ಪ್ರಧಾನಿ ಮನಮೋಹನ್ ಸಿಂಗ್, ನಗರದ ಬಡವರಿಗಾಗಿ 15 ಲಕ್ಷಕ್ಕೂ ಅಧಿಕ ಮನೆಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ನಗರ ಹೊರವಲಯದಲ್ಲಿ 2400 ಕೋಟಿ ರೂಪಾಯಿ  ವೆಚ್ಚದಲ್ಲಿ ಕೊಳೆಗೇರಿವಾಸಿಗಳಿಗೆ ವಸತಿ ಯೋಜನೆ ಯನ್ನು ಉದ್ಘಾಟಿಸಿ ಮಾತನಾಡಿದ ಸಿಂಗ್, ಚಂಡಿಗಢ ಕೊಳೆಗೇರಿ ಮುಕ್ತ ಮೊದಲ ನಗರ‌್ಯ ಎನಿಸಲಿದೆ ಎಂದು ಅಭಿಪ್ರಾಯ ಪಟ್ಟರು.

`ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ರೂಪುಗೊಳ್ಳುವ  ನಿಟ್ಟಿನಲ್ಲಿ  ಇಂತಹ ಮಹತ್ವದ ಯೋಜನೆಗಳು ದೇಶಕ್ಕೆ ಹೊಸ ಆಯಾಮ ಕಲ್ಪಿಸಲಿವೆ' ಎಂದು ಅವರು ನುಡಿದರು.

ADVERTISEMENT

ನಗರದಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ಜನಸಂಖ್ಯೆಯು ಮುಂದಿನ ಕೆಲ ವರ್ಷಗಳಲ್ಲಿ ನಗರದ ಮೂಲ ಸೌಕರ್ಯದ ಮೇಲೆ ವ್ಯಾಪಕ ಒತ್ತಡ ಹೇರಲಿದೆ ಎಂದು ಪ್ರಧಾನಿ ಅಭಿಪ್ರಾಯ  ಪಟ್ಟರು.

`ಭಾರತದಲ್ಲಿ ನಗರೀಕರಣದ ಓಟ ತುಂಬಾ ವೇಗವಾಗಿ ಸಾಗುತ್ತಿದೆ. 1971ರಲ್ಲಿ ನಗರಗಳ ಜನಸಂಖ್ಯೆ 11 ಕೋಟಿಗಳಷ್ಟಿತ್ತು. ಕಳೆದ 40 ವರ್ಷಗಳಲ್ಲಿ ಅಂದರೆ 2011 ವರೆಗೆ ನಗರಗಳ ಜನಸಂಖ್ಯೆ 27 ಕೋಟಿಗಳಿಗೆ ಏರಿಕೆಯಾಗಿದೆ. ಮುಂದಿನ 20 ವರ್ಷಗಳಲ್ಲಿ ಇನ್ನೂ 22 ಕೋಟಿಗಳಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ' ಎಂದು ಸಿಂಗ್ ತಿಳಿಸಿದ್ದರು.

`ನಮ್ಮ ನಗರಗಳಲ್ಲಿ ಹೆಚ್ಚುತ್ತಿರುವ  ಕೊಳೆಗೇರಿಗಳು ನಗರೀಕರಣದಿಂದ ಉದ್ಭವಿಸುತ್ತಿರುವ ಸಮಸ್ಯೆಗಳ ಮಾದರಿಯನ್ನು ಬಿಂಬಿಸುತ್ತವೆ' ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.