ಜೈಪುರ: ನವಿಲು ಬ್ರಹ್ಮಚಾರಿ, ಅದು ಹೆಣ್ಣು ನವಿಲಿನೊಂದಿಗೆ ಲೈಂಗಿಕ ಸಂಪರ್ಕ ನಡೆಸುವುದಿಲ್ಲ. ಹೆಣ್ಣು ನವಿಲು ಗಂಡು ನವಿಲಿನ ಕಣ್ಣೀರು ಕುಡಿದು ಬಸಿರಾಗುತ್ತವೆ. ಶ್ರೀಕೃಷ್ಣ ಪರಮಾತ್ಮನೂ ನವಿಲುಗರಿಯನ್ನು ಕಿರೀಟದಲ್ಲಿ ಧರಿಸಿದ್ದಾನೆ- ಹೀಗೆ ಹೇಳಿದ್ದು ರಾಜಸ್ತಾನ ಹೈಕೋರ್ಟ್ ನ್ಯಾಯಾಧೀಶರು!
ಹಸುವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದ ರಾಜಸ್ತಾನ ಹೈಕೋರ್ಟ್ ನ್ಯಾಯಾಧೀಶ ಮಹೇಶ್ ಚಂದ್ರ ಶರ್ಮಾ ಅವರು ಸಿಎನ್ಎನ್- ನ್ಯೂಸ್ 18 ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನವಿಲನ್ನು ರಾಷ್ಟ್ರ ಪಕ್ಷಿಯನ್ನಾಗಿ ಘೋಷಿಸಿದ್ದು ಯಾಕೆ ಎಂಬುದರ ಬಗ್ಗೆ ಈ ರೀತಿಯ ವಿವರಣೆಯನ್ನು ನೀಡಿದ್ದಾರೆ.
ಹಸುವನ್ನು ಭಾರತದ ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು. ಗೋಹತ್ಯೆ ಮಾಡಿದವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಬೇಕು ಎಂದು ರಾಜಸ್ತಾನ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ ಬೆನ್ನಲ್ಲೇ ಶರ್ಮಾ ಅವರು ನವಿಲು ಬ್ರಹ್ಮಚಾರಿ ಎಂಬ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ನೇಪಾಳ ಹಸುವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿದೆ. ಅದೇ ರೀತಿ ಭಾರತದಲ್ಲಿಯೂ ಹಸುವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು ಎಂದು ಶರ್ಮಾ ಹೇಳಿದ್ದಾರೆ.
[related]
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.