ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರ ಮುಂದಿನ ತಿಂಗಳು ಮಂಡಿಸಲಿರುವ ಬಜೆಟ್ ‘ನವೋದ್ಯಮ ಸ್ನೇಹಿ’ (ಸ್ಟಾರ್ಟ್ ಅಪ್) ಆಗಿರಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಶನಿವಾರ ಇಲ್ಲಿ ಸುಳಿವು ನೀಡಿದರು.
ಸ್ಟಾರ್ಟ್ ಅಪ್ ಆರಂಭಿಸಲು ಪೂರಕವಾದ ತೆರಿಗೆ ಉತ್ತೇಜನಾ ವ್ಯವಸ್ಥೆಯನ್ನು ಬಜೆಟ್ನಲ್ಲಿ ಘೋಷಿಸಲಾಗುವುದು ಎಂದು ತಿಳಿಸಿದರು.
ಸ್ಟಾರ್ಟ್ ಅಪ್ ಇಂಡಿಯಾ ಸಮಾವೇಶದಲ್ಲಿ ಮಾತನಾಡಿದ ಅವರು, ಹೊಸ ಉದ್ಯಮಗಳ ಅಗತ್ಯ ಮನಗಂಡಿರುವ ಸರ್ಕಾರ ‘ಉದ್ಯಮ ಸ್ನೇಹಿ ತೆರಿಗೆ ಪದ್ಧತಿ’ ರೂಪಿಸಲು ಈಗಾಗಲೇ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದರು.
‘ಲೈಸನ್ಸ್ ರಾಜ್’ (ಪರವಾನಗಿ ಪಡೆಯಲು ಕಿರುಕುಳ) ಪದ್ಧತಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಂತ್ಯ ಹಾಡಿದೆ. ಉದ್ಯಮ ಆರಂಭಕ್ಕೆ ಲೈಸನ್ಸ್ ಪಡೆಯಲು ಉದ್ಯಮಿಗಳು ಹಿಂದಿನಂತೆ ಹರಸಾಹಸ ಮಾಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.
ಲೈಸನ್ಸ್ ನೀಡಲು ಇದ್ದ ಎಲ್ಲ ಅಡೆತಡೆ ನಿವಾರಿಸಲಾಗಿದೆ. ಹಿಂದೆಂದಿಗಿಂತಲೂ ಸರಳ ಹಾಗೂ ಸುಲಭವಾದ ವಿಧಾನದಲ್ಲಿ ಲೈಸನ್ಸ್ ಪಡೆಯಬಹುದು ಎಂದು ಸಚಿವರು ತಿಳಿಸಿದರು.
ಸ್ಟ್ಯಾಂಡ್ ಅಪ್ ಇಂಡಿಯಾ: ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯ ಜತೆಗೆ ಪರಿಶಿಷ್ಟ ಜಾತಿ, ಪಂಗಡದ ಮಹಿಳಾ ಉದ್ಯಮಿಗಳಿಗೆ ಬ್ಯಾಂಕ್ ಮೂಲಕ ಆರ್ಥಿಕ ನೆರವು ಒದಗಿಸಲು ‘ಸ್ಟ್ಯಾಂಡ್ ಅಪ್ ಇಂಡಿಯಾ’ ಯೋಜನೆಯನ್ನೂ ಪ್ರತ್ಯೇಕವಾಗಿ ಜಾರಿಗೆ ತರಲಾಗುವುದು ಎಂದು ಅವರು ಘೋಷಿಸಿದರು.
‘ಸಾರ್ವಜನಿಕ ಮತ್ತು ಖಾಸಗಿ ರಂಗದ ಬ್ಯಾಂಕ್ಗಳ ಪ್ರತಿ ಶಾಖೆಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ತಲಾ ಒಬ್ಬರು ಮತ್ತು ಒಬ್ಬ ಮಹಿಳೆಗೆ ನೆರವು ನೀಡಬೇಕು’ ಎಂದು ತಿಳಿಸಿದರು.
ಸವಾಲುಗಳ ನಡುವೆ ಸಾಧನೆ ತಂದ ಸಮಾಧಾನ: ವಿಶ್ವದ ಬಲಾಢ್ಯ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತಕ್ಕೆ ತನ್ನದೇ ಆದ ಇತಿಮಿತಿಯಲ್ಲಿ ಹಲವಾರು ಸಮಸ್ಯೆಗಳಿವೆ. ಇಡೀ ವಿಶ್ವವೇ ಆರ್ಥಿಕ ಹಿಂಜರಿತದಿಂದ ತತ್ತರಿಸಿರುವಾಗ ಭಾರತದ ಆರ್ಥಿಕ ಸಾಧನೆ ಕಂಡು ಸಮಾಧಾನ ಪಟ್ಟುಕೊಳ್ಳಬೇಕಾದ ಸ್ಥಿತಿ ಇದೆ ಎಂದು ಜೇಟ್ಲಿ ಹೇಳಿದರು.
‘ಜಾಗತಿಕ ಅರ್ಥ ವ್ಯವಸ್ಥೆಯ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಯಾವ ಹೊತ್ತಿನಲ್ಲಿ ಏನಾಗುತ್ತದೆ ಎಂದು ಹೇಳಲಾಗದು’ ಎಂದರು.
‘ಈ ಮೊದಲಾದರೆ ಹತ್ತು ವರ್ಷಗಳಿಗೊಮ್ಮೆ ಆರ್ಥಿಕ ದುಸ್ಥಿತಿ ನಿರ್ಮಾಣವಾಗುತ್ತಿತ್ತು . ಈಗ ಒಂದೇ ದಿನದಲ್ಲಿ ಎರಡು ಬಾರಿ ಅಂಥ ಆತಂಕಕಾರಿ ಸ್ಥಿತಿ ನಿರ್ಮಾಣವಾಗುತ್ತಿದೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಹಣಕಾಸು ಸಚಿವ ಹೇಳಿದ್ದು
* ‘ಉದ್ಯಮ ಸ್ನೇಹಿ ತೆರಿಗೆ ಪದ್ಧತಿ’ ರೂಪಿಸಲು ಅಗತ್ಯ ಸಿದ್ಧತೆ
* ಪ್ರತಿಯೊಂದು ಬ್ಯಾಂಕ್ ಶಾಖೆಯಿಂದ ಕನಿಷ್ಠ ಒಬ್ಬ ಮಹಿಳೆ ಮತ್ತು ಪರಿಶಿಷ್ಟರೊಬ್ಬರಿಗೆ ಸ್ಟ್ಯಾಂಡ್ ಅಪ್ ಯೋಜನೆಯ ಅಡಿ ಸಾಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.