ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಸಾಂಬಾ ವಲಯದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ನಡೆಸಿದ ಗುಂಡಿನ ದಾಳಿಗೆ ನಾಲ್ವರು ಬಿಎಸ್ಎಫ್ ಯೋಧರು ಹುತಾತ್ಮರಾಗಿದ್ದಾರೆ. ಅಂತರರಾಷ್ಟೀಯ ಗಡಿರೇಖೆಯಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಕದನ ವಿರಾಮ ಉಲ್ಲಂಘನೆ ಈಚಿನ ದಿನಗಳಲ್ಲಿ ಸಾಮಾನ್ಯ ಎಂಬಂತೆ ಆಗಿದೆ.
ಗಡಿಯಲ್ಲಿ ಶಾಂತಿ ಕಾಪಾಡಬೇಕೆಂದು 2003ರಲ್ಲಿ ಕದಮ ವಿರಾಮ ಒಪ್ಪಂದ ಜಾರಿಯಾಗಿತ್ತು. ರಂಜಾನ್ ತಿಂಗಳಾದ ಕಾರಣ ಗಡಿ ಶಾಂತವಾಗಿರಬಹುದು ಎಂಬ ನಿರೀಕ್ಷೆಯೂ ಇತ್ತು. ಆದರೆ ಈಗ ಗಡಿಯಲ್ಲಿ ಮತ್ತು ಉದ್ವಿಗ್ನತೆ ತಲೆದೋರಿದೆ.
ಈ ತಿಂಗಳ ಆರಂಭದಲ್ಲಿ ಜಮ್ಮು ಕಾಶ್ಮೀರದ ಅಖ್ನೂರ್, ಕನಚಕ್ ಮತ್ತು ಖೋರ್ ಪ್ರದೇಶದಲ್ಲಿ ಪಾಕ್ ದಾಳಿ ನಡೆಸಿದ್ದು ಇಬ್ಬರು ಬಿಎಸ್ಎಫ್ ಯೋದರು ಮತ್ತು 13 ನಾಗರಿಕರು ಮೃತಪಟ್ಟಿದ್ದರು.
ಜಮ್ಮು ಮತ್ತು ಕಾಶ್ಮೀರದ ಕದನ ವಿರಾಮ ದಾಳಿಗೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ‘ರಂಜಾನ್ ಮಾಸದ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಕದನ ವಿರಾಮವನ್ನು ಭಾರತ ಗೌರವಿಸುತ್ತದೆ. ಆದರೆ ಪಾಕ್ನ ಅಪ್ರಚೋದಿತ ಗುಂಡಿನ ದಾಳಿಯು ಗಡಿ ಕಾಯುವ ಯೋಧರನ್ನು ಕೆರಳಿಸುವಂತಿದೆ. ಪಾಕಿಸ್ತಾನ ಇದೇ ಚಾಳಿಯನ್ನು ಮುಂದುವರಿಸಿದರೆ ನಾವು ಸುಮ್ಮನಿರುವುದಿಲ್ಲ. ದೇಶವನ್ನು ರಕ್ಷಿಸುವುದು ನಮ್ಮ ಕರ್ತವ್ಯ’ ಎಂದು ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.