ADVERTISEMENT

ನಿರಾಸೆ ಮೂಡಿಸಿದ ಮುಂಗಾರು

ಪಿಟಿಐ
Published 11 ಜುಲೈ 2017, 19:30 IST
Last Updated 11 ಜುಲೈ 2017, 19:30 IST
ನಿರಾಸೆ ಮೂಡಿಸಿದ ಮುಂಗಾರು
ನಿರಾಸೆ ಮೂಡಿಸಿದ ಮುಂಗಾರು   

ನವದೆಹಲಿ:  ದೇಶದ ಕೇಂದ್ರ ಮತ್ತು ದಕ್ಷಿಣ ಭಾಗಗಳಲ್ಲಿ ಕಳೆದ ಒಂದು ವಾರದಲ್ಲಿ ಮಳೆ ನಿಂತಿದೆ. ಹೆಚ್ಚಿನ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕರ್ನಾಟಕದ ದಕ್ಷಿಣ ಒಳನಾಡು, ಕೇರಳ, ಮಹಾರಾಷ್ಟ್ರದ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಲ್ಲಿ ಮಳೆ ಕೊರತೆ ತೀವ್ರವಾಗಿದೆ. ಮುಂಗಾರು ಋತುವಿನಲ್ಲಿ ಈವರೆಗೆ ಸಾಮಾನ್ಯವಾಗಿ ಬೀಳುವುದಕ್ಕಿಂತ ಮಳೆ ಕೊರತೆಯ ಸರಾಸರಿ ಪ್ರಮಾಣ ಶೇ 8ರಷ್ಟಿದೆ. ಇಡೀ ದೇಶದಲ್ಲಿ ಬಿದ್ದಿರುವ ಮಳೆಯ ಪ್ರಮಾಣವೂ ಕಡಿಮೆಯೇ ಇದೆ. ಪೂರ್ವ ಮತ್ತು ಈಶಾನ್ಯ ಭಾಗಗಳಲ್ಲಿಯೂ ಮಳೆ ಶೇ 5ರಷ್ಟು ಕೊರತೆಯಾಗಿದೆ. ಆದರೆ ಗಂಗಾ ನದಿ ಪ್ರದೇಶದಲ್ಲಿ ಬರುವ ವಾಯವ್ಯ ಭಾರತದಲ್ಲಿ ವಾಡಿಕೆಗಿಂತ ಶೇ 29ರಷ್ಟು ಹೆಚ್ಚು ಮಳೆಯಾಗಿದೆ. 

ಈ ಪ್ರದೇಶದಲ್ಲಿ ದೆಹಲಿ, ಪಂಜಾಬ್‌, ಹರಿಯಾಣ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಉತ್ತರಪ್ರದೇಶ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡಗಳು ಬರುತ್ತವೆ.

ADVERTISEMENT

ಈ ಪ್ರದೇಶದಲ್ಲಿ ಕಳೆದ ಮೂರು ವರ್ಷಗಳಲ್ಲಿ ಮಳೆ ಕೊರತೆಯಾಗಿತ್ತು.

ಮಳೆ ಹೆಚ್ಚುವ ಸೂಚನೆ
ಬಂಗಾಳ ಕೊಲ್ಲಿಯಲ್ಲಿ ಮುಂದಿನ ಎರಡು ಮೂರು ದಿನಗಳಲ್ಲಿ ಚಂಡಮಾರುತ ರೂಪುಗೊಳ್ಳುವ ಲಕ್ಷಣಗಳು ಕಾಣಿಸಿಕೊಂಡಿವೆ. ಹಾಗಾಗಿ ದಕ್ಷಿಣದಲ್ಲಿ ಮಳೆ ಚುರುಕಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು ಹೆಚ್ಚು ಮಳೆ ಸುರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.