ಉತ್ತರಾಖಂಡದಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದ ನಲುಗಿರುವ ಸಂತ್ರಸ್ತರಿಗೆ ವಿವಿಧ ರಾಜ್ಯಗಳು ಹಾಗೂ ಪ್ರಮುಖ ವ್ಯಕ್ತಿಗಳು, ಸಂಸ್ಥೆಗಳು ನೆರವಿನ ಹಸ್ತ ಚಾಚುತ್ತಿದ್ದು, ನೆರವಿನ ಮಹಾಪೂರವೇ ಹರಿದು ಬರುತ್ತಿದೆ.
ವಿಶೇಷ ಪ್ಯಾಕೇಜ್
ನವದೆಹಲಿ(ಪಿಟಿಐ): ಪ್ರವಾಹದಿಂದ ತತ್ತರಿಸಿರುವ ಉತ್ತರಾಖಂಡಕ್ಕೆ ಗ್ರಾಮೀಣ ಅಭಿವೃದ್ಧಿ ಸಚಿವ ಜಯರಾಂ ರಮೇಶ್ ರೂ 340 ಕೋಟಿಯ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.
ವಿಶೇಷ ಪ್ಯಾಕೇಜ್ನಲ್ಲಿ ಮನೆಗಳ ನಿರ್ಮಾಣ, 82 ರಸ್ತೆ, 27 ಸೇತುವೆ ಸೇರಿದಂತೆ 664 ಕಿ.ಮೀ. ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದ್ದಾರೆ.
ಮಹಿಂದ್ರಾದಿಂದ ರೂ 1 ಕೋಟಿ
ನವದೆಹಲಿ(ಪಿಟಿಐ): ಉತ್ತರಾಖಂಡದಲ್ಲಿ ಉಂಟಾಗಿರುವ ಭೀಕರ ಪ್ರವಾಹದಿಂದ ನಲುಗಿರುವ ಸಂತ್ರಸ್ತರ ನೆರವಿಗೆ ಮುಂದಾಗಿರುವ ಮಹಿಂದ್ರಾ ಹಾಗೂ ಮಹಿಂದ್ರಾ ಸಮೂಹ ಸಂಸ್ಥೆ ಉತ್ತರಾಖಂಡ ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ 1 ಕೋಟಿ ನೆರವಿನ ಹಸ್ತ ಚಾಚಿದೆ.
`ಪ್ರವಾಹ ಸ್ಥಿತಿ ನಮಗೆ ಆಘಾತ ಉಂಟು ಮಾಡಿದೆ' ಎಂದು ಮಹಿಂದ್ರಾ ಸಮೂಹ ಸಂಸ್ಥೆಯ ಮುಖ್ಯಸ್ಥ ಆನಂದ ಮಹೀಂದ್ರ ಅವರು ಇದೇ ಸಂದರ್ಭದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
ರೂ 5 ಕೋಟಿ ಘೋಷಣೆ
ಭುವನೇಶ್ವರ(ಪಿಟಿಐ): ಒಡಿಶಾದ 100ಕ್ಕೂ ಹೆಚ್ಚು ಜನ ಉತ್ತರಾಖಂಡನ ವಿವಿಧ ಸ್ಥಳಗಳಲ್ಲಿ ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದು, ಅವರ ಹಾಗೂ ಪ್ರವಾಹದಲ್ಲಿ ಸಂತ್ರಸ್ತರ ನೆರವಿಗೆ ಮುಂದಾಗಿರುವ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯ್ಕ ರೂ 5 ಕೋಟಿ ನೆರವು ಘೋಷಣೆ ಮಾಡಿದ್ದಾರೆ.
ಬಿಜೆಪಿಯಿಂದ ನಿಧಿ ಸಂಗ್ರಹ
ಲಕ್ನೋ(ಪಿಟಿಐ): ಉತ್ತರ ಪ್ರದೇಶದ ಬಿಜೆಪಿ ಉತ್ತರಾಖಂಡ್ನ ಸಂತ್ರಸ್ತರ ನೆರವಿಗೆ ನಿಧಿ ಸಂಗ್ರಹಿಸಲು ಮುಂದಾಗಿದ್ದು, ಶಾಸಕರು ತಮ್ಮ ಒಂದು ತಿಂಗಳ ವೇತನ ನೀಡುವುದಾಗಿ ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.