ನವದೆಹಲಿ (ಪಿಟಿಐ): ಸಬ್ಸಿಡಿ ಫಲಾನುಭವಿಗಳಲ್ಲಿ `ಆಧಾರ್' ಕಾರ್ಡ್ ಹೊಂದಿರುವವರ ಸಂಖ್ಯೆ ಬಹಳ ಕಡಿಮೆ ಇರುವುದರಿಂದ `ನೇರ ನಗದು ವರ್ಗಾವಣೆ ವ್ಯವಸ್ಥೆ' ಜಾರಿ ಅಂದುಕೊಂಡಷ್ಟು ಸುಲಭವಲ್ಲ ಎಂದು ಪೆಟ್ರೋಲಿಯಂ ಸಚಿವಾಲಯ ಹೇಳಿದೆ. ಜ. 1 ರಿಂದ ಕರ್ನಾಟಕದ 3 ಜಿಲ್ಲೆಗಳೂ ಸೇರಿದಂತೆ ವಿವಿಧ ರಾಜ್ಯಗಳ ಒಟ್ಟು 51 ಜಿಲ್ಲೆಗಳಲ್ಲಿ ನೇರ ನಗದು ಸಬ್ಸಿಡಿ ವರ್ಗಾವಣೆ ವ್ಯವಸ್ಥೆ ಜಾರಿಗೆ ಬರಲಿದೆ.
`ಇದು ಅತ್ಯುತ್ತಮ ಯೋಜನೆ. ಆದರೆ, ಜಾರಿ ಹಂತದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ದೇಶದ 120 ಕೋಟಿಗೂ ಅಧಿಕ ಜನಸಂಖ್ಯೆಯಲ್ಲಿ 20 ಕೋಟಿ ಜನ ಮಾತ್ರವೇ `ಆಧಾರ್' ಕಾರ್ಡ್ಗಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ.
ಗ್ರಾಮೀಣ ಪ್ರದೇಶದ ಶೇ 80ರಿಂದ ಶೇ 90ರಷ್ಟು ಫಲಾನುಭವಿಗಳಿಗೆ ಆಧಾರ್ ಕಾರ್ಡ್ ಲಭಿಸಿಲ್ಲ ಎಂದು ತೈಲ ಕಾರ್ಯದರ್ಶಿ ಜಿ.ಸಿ.ಚರ್ತುವೇದಿ ಮಂಗಳವಾರ ಇಲ್ಲಿ ನಡೆದ `ಪೆಟ್ರೋ ಇಂಡಿಯಾ ಸಮ್ಮೇಳನ'ದಲ್ಲಿ ಗಮನ ಸೆಳೆದಿದ್ದಾರೆ. `ಏಪ್ರಿಲ್ ವೇಳೆಗೆ 31 ಜಿಲ್ಲೆಗಳಲ್ಲಿ ಶೇ 80ರಷ್ಟು ಫಲಾನುಭವಿಗಳಿಗೆ `ಆಧಾರ್' ಕಾರ್ಡ್ ವಿತರಿಸಲಾಗುವುದು ಎಂದು ಯುಐಡಿಎಐ ಈ ಮೊದಲು ಹೇಳಿತ್ತು. ಈಗ ಇನ್ನಷ್ಟು ಸಮಯ ಬೇಕಾಗಲಿದೆ ಎನ್ನುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.