ನವದೆಹಲಿ (ಪಿಟಿಐ): ಭಾರತಕ್ಕೆ ಬೇಕಾಗಿರುವ ನೌಕಾ ಯುದ್ಧ ತಂತ್ರ ಮಾಹಿತಿ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ನೌಕಾದಳದ ನಿವೃತ್ತ ಮುಖ್ಯಸ್ಥ ಅರುಣ್ ಪ್ರಕಾಶ್ ಅವರ ಬಂಧು ರವಿ ಶಂಕರನ್ ವಿಚಾರಣೆ ಜ.19ರಂದು ಲಂಡನ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಇದಕ್ಕಾಗಿ ಸಿಬಿಐನ ಇಬ್ಬರು ಅಧಿಕಾರಿಗಳು ಭಾನುವಾರ ಲಂಡನ್ಗೆ ಪ್ರಯಾಣ ಬೆಳೆಸಿದರು.
ನೌಕಾದಳದ ಯುದ್ಧ ಕಾರ್ಯತಂತ್ರಕ್ಕೆ ಸಂಬಂಧಪಟ್ಟ ಹಾಗೂ ವಹಿವಾಟಿನ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವಾದ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪ 46 ವರ್ಷದ ಶಂಕರನ್ ಮೇಲಿದ್ದು, ಈತನನ್ನು ತನಗೆ ಹಸ್ತಾಂತರಿಸುವಂತೆ ಭಾರತವು ಬ್ರಿಟನ್ಗೆ ಪದೇ ಪದೇ ಮನವಿ ಮಾಡುತ್ತಾ ಬಂದಿದೆ. ಪಾಸ್ಪೋರ್ಟ್ ಇಲ್ಲದೆ ಬ್ರಿಟನ್ ಹಾಗೂ ಯೂರೋಪ್ನ ಹಲವಾರು ರಾಷ್ಟ್ರಗಳಲ್ಲಿ ಅಡ್ಡಾಡುತ್ತಿದ್ದ ಶಂಕರನ್ನನ್ನು ಲಂಡನ್ ಮೆಟ್ರೊಪಾಲಿಟನ್ ಪೊಲೀಸರು ಕಳೆದ ಏ.21ರಂದು ಬಂಧಿಸಿದ್ದರು.
ನೌಕ ಯುದ್ಧ ತಂತ್ರ ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ಐಎಎಫ್ನ ಮಾಜಿ ವಿಂಗ್ ಕಮಾಂಡರ್ ಸಾಂಭಾಜಿರಾವ್ ಸುರ್ವೆ, ಶಂಕರನ್, ನೌಕಾದಳದ ಮಾಜಿ ಕಮಾಂಡರ್ಗಳಾದ ವಿನೋದ್ ಕುಮಾರ್ ಝಾ, ವಿನೋದ್ ರಾಣಾ, ರಾಜ್ ರಾಣಿ ಜೈಸ್ವಾಲ್ ಸೇರಿದಂತೆ ಒಟ್ಟು ಒಂಬತ್ತು ಅಧಿಕಾರಿಗಳ ವಿರುದ್ಧ ಸಿಬಿಐ 2006ರ ಮಾರ್ಚಿ 20ರಂದು ಮೊಕದ್ದಮೆ ದಾಖಲಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.