ADVERTISEMENT

ನ್ಯಾಯಾಂಗಕ್ಕೆ ತಲೆ ಬಾಗಿದ ಜಯಾ: ಕರುಣಾನಿಧಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST

ಚೆನ್ನೈ (ಪಿಟಿಐ):  ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ತಮ್ಮ ವಿರುದ್ಧದ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗುವ ಮೂಲಕ ಕೊನೆಗೂ ನ್ಯಾಯಾಂಗಕ್ಕೆ `ತಲೆ ಬಾಗಿದ್ದಾರೆ~ ಎಂದು ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಗುರುವಾರ ಪ್ರತಿಕ್ರಿಯಿಸಿದರು.

ಈ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಹಾಜರಾಗುವುದನ್ನು ತಪ್ಪಿಸಿಕೊಳ್ಳಲು ದೀರ್ಘ ಕಾಲದವರೆಗೆ ಅನೇಕ ವಿನಾಯಿತಿಗಳನ್ನು ಕೋರಿದ್ದ ಜಯಲಲಿತಾ ಕಡೆಗೂ ನ್ಯಾಯಾಂಗಕ್ಕೆ `ತಲೆ ಬಾಗಿದ್ದಾರೆ~ ಎಂದು ಕರುಣಾನಿಧಿ ಹೇಳಿದರು.

`ರಾಜೀನಾಮೆ ಕೇಳುವ ಹವ್ಯಾಸ ನನಗಿಲ್ಲ. ಪ್ರತಿಯೊಂದಕ್ಕೂ ರಾಜೀನಾಮೆ ಕೇಳುವುದು ಅವರ (ಜಯಲಲಿತಾ ಅವರ) ಅಭ್ಯಾಸ ಆಗಿತ್ತು~ ಎಂದು ಜಯಲಲಿತಾ ಅಧಿಕಾರದಿಂದ ಕೆಳಗಿಳಿಯಬೇಕೆಂದು ಕೋರುವಿರಾ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಜಯಲಲಿತಾ ಅವರಿಗೆ ನ್ಯಾಯಾಲಯಕ್ಕೆ ಹೋಗುವುದು ಬೇಕಿರಲಿಲ್ಲ. ಅದಕ್ಕಾಗೇ ಅವರು ವಿನಾಯಿತಿಗಳನ್ನು ಕೋರುತ್ತಾ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗುವುದನ್ನು ವಿಳಂಬ ಮಾಡಿದರು ಎಂದೂ ಕರುಣಾನಿಧಿ ಆರೋಪಿಸಿದರು.

ಕೂಡುಂಕುಳಂ ಪರಮಾಣು ವಿದ್ಯುತ್ ಘಟಕದ ವಿರುದ್ಧ ನಡೆದಿರುವ ಪ್ರತಿಭಟನೆ ನೇತೃತ್ವ ವಹಿಸಿರುವ ಪರಮಾಣು ಶಕ್ತಿ ವಿರೋಧಿ ಕಾರ್ಯಕರ್ತರು ಈ ವಿವಾದಾತ್ಮಕ ಯೋಜನೆಯ ಕಾಮಗಾರಿ ತಡೆಯಲು ಡಿಎಂಕೆಯು ಯುಪಿಎದಿಂದ ಹೊರಬರಬೇಕು ಎಂದು ಒತ್ತಾಯಿಸಿದ್ದಾರಲ್ಲ ಎಂದು ಕೇಳಿದ ಪ್ರಶ್ನೆಗೆ ಅವರು, ಕೇಂದ್ರದಲ್ಲಿ ಪ್ರಾದೇಶಿಕ ಪಕ್ಷವೊಂದು ಅಧಿಕಾರ ಹಂಚಿಕೊಳ್ಳುವುದನ್ನು ಕೆಲವು ರಾಜಕೀಯ ಪಕ್ಷಗಳು

ಸಹಿಸಿಕೊಳ್ಳುವುದಿಲ್ಲ. ಇಂಥವರು ಯಾವಾಗಲೂ ಈ ರೀತಿಯ ಬೇಡಿಕೆ ಮುಂದಿಡುತ್ತಾರೆ ಎಂದರು.
ಯೋಜನೆಯ ಎಲ್ಲಾ ಸುರಕ್ಷತಾ ಅಂಶಗಳ ಬಗ್ಗೆ ಪರಿಶೀಲಿಸಲು ಕೇಂದ್ರ ತಜ್ಞರ ಸಮಿತಿಯನ್ನು ರಚಿಸಿದೆ.
 
ಜನರ ಭೀತಿ ನಿವಾರಿಸಲು ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಕೂಡ ಯೋಜನಾ ಸ್ಥಳಕ್ಕೆ ಭೇಟಿ ನೀಡಲು ಒಪ್ಪಿಕೊಂಡಿದ್ದಾರೆ ಎಂದು ನುಡಿದರು.

`ಜನರ ಆತಂಕವನ್ನು ನಿವಾರಿಸಬೇಕು ಎಂಬುದು ಡಿಎಂಕೆಯ ಅಭಿಪ್ರಾಯ. ಈ ದಿಸೆಯಲ್ಲಿ ತಜ್ಞರ ಸಮಿತಿ ರಚಿಸಲು ಪ್ರಯತ್ನಗಳು ನಡೆದಿವೆ~ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.