ADVERTISEMENT

ನ. 8ರಂದು ‘ಕರಾಳ ದಿನ’ ಆಚರಣೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 19:30 IST
Last Updated 24 ಅಕ್ಟೋಬರ್ 2017, 19:30 IST
ನ. 8ರಂದು ‘ಕರಾಳ ದಿನ’ ಆಚರಣೆ
ನ. 8ರಂದು ‘ಕರಾಳ ದಿನ’ ಆಚರಣೆ   

ನವದೆಹಲಿ : ನೋಟು ರದ್ದತಿ ಮಾಡಿ ನವೆಂಬರ್ 8ಕ್ಕೆ ಒಂದು ವರ್ಷ ಆಗುವುದರಿಂದ ಆ ದಿನವನ್ನು ‘ಕರಾಳ ದಿನ’ ಎಂದು ಆಚರಿಸುವುದಾಗಿ ಹಾಗೂ ನೋಟು ರದ್ದತಿಯಿಂದ ಆರ್ಥಿಕತೆಯ ಮೇಲೆ ಉಂಟಾದ ದುಷ್ಪರಿಣಾಮಗಳನ್ನು ಎತ್ತಿ ತೋರಿಸುವ ಸಲುವಾಗಿ ದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿ ವಿರೋಧ ಪಕ್ಷಗಳು ಹೇಳಿವೆ.

ವಿರೋಧ ಪಕ್ಷಗಳ ಸಮನ್ವಯ ಸಮಿತಿಯು ಪಾರ್ಲಿಮೆಂಟ್ ಹೌಸ್‌ನಲ್ಲಿ ಸೋಮವಾರ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಅವರು, ‘ನೊಟು ರದ್ದತಿಯು ಎನ್‌ಡಿಎ ಸರ್ಕಾರದ ಅಸಮರ್ಪಕ ಗ್ರಹಿಕೆಯ ಮತ್ತು ಆತುರದ ನಿರ್ಧಾರ. ಇದೊಂದು ಹಗರಣ ಎಂದೇ ಹೇಳಬೇಕು’ ಎಂದು ಟೀಕಿಸಿದ್ದಾರೆ.

ಹದಿನೆಂಟು ವಿರೋಧ ಪಕ್ಷಗಳು ಎಲ್ಲಾ ರಾಜ್ಯಗಳಲ್ಲಿ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಅವರು ತಿಳಿಸಿದರು.

ADVERTISEMENT

ತಮಿಳುನಾಡಿನಲ್ಲಿ ‘ಕರುಪ್ಪು ದಿನಮ್’

ಚೆನ್ನೈ: ಗುಲಾಂ ನಬಿ ಆಜಾದ್ ಅವರ ಹೇಳಿಕೆಯ ಬೆನ್ನಲ್ಲೇ, ‘ತಮಿಳುನಾಡಿನ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನ. 8 ಅನ್ನು ‘ಕರುಪ್ಪು ದಿನಮ್’ (ಕರಾಳ ದಿನ) ಎಂದು ಡಿಎಂಕೆ ಆಚರಿಸಲಿದೆ’ ಎಂದು ಪಕ್ಷದ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.

‘ನೋಟು ರದ್ದತಿಯಂಥ ಏಕಪಕ್ಷೀಯ ನಿರ್ಧಾರದಿಂದಾಗಿ ಅಸಂಘಟಿತ ವಲಯವು ಹಾನಿ ಅನುಭವಿಸಿದೆ. ದೇಶದ ಆರ್ಥಿಕತೆ ಜಡವಾಗಿದೆ’ ಎಂದು  ಅವರು ಅಭಿಪ್ರಾಯಪಟ್ಟಿದ್ದಾರೆ.

ಬಿಹಾರದಲ್ಲಿ ಆರ್‌ಜೆಡಿ ರ‍್ಯಾಲಿ

ಪಟ್ನಾ: ನೋಟು ರದ್ದತಿಯ ವೈಫಲ್ಯವನ್ನು ತೋರಿಸಲು ನ.8ರಂದು ಬಿಹಾರದಾದ್ಯಂತ ರ‍್ಯಾಲಿ ನಡೆಸುವುದಾಗಿ ಆರ್‌ಜೆಡಿ ಮುಖಂಡ ಲಾಲು ಪ್ರಸಾದ್ ಅವರು ಹೇಳಿದ್ದಾರೆ.

‘₹ 500 ಮತ್ತು ₹ 1,000 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ್ದರಿಂದಾಗಿ ಸಾಮಾನ್ಯ ಜನರು ಪಡೆದಿದ್ದೇನು ಎಂದು ರ‍್ಯಾಲಿಯಲ್ಲಿ ಬಿಜೆಪಿಯನ್ನು ಪ್ರಶ್ನಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.