ಹೈದರಾಬಾದ್ : ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ನವೆಂಬರ್ 2ರಿಂದ 3,000 ಕಿ.ಮೀ. ಪಾದಯಾತ್ರೆ ನಡೆಸಲಿದ್ದಾರೆ.
‘ಚಂದ್ರಬಾಬು ನಾಯ್ಡು ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ದೊಡ್ಡ ಮಟ್ಟದಲ್ಲಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಇಡುಪುಲಪಾಯದಿಂದ ಆರಂಭವಾಗುವ ಪಾದಯಾತ್ರೆ ಚಿತ್ತೂರು ಮಾರ್ಗವಾಗಿ ಇಡೀ ರಾಜ್ಯವನ್ನು ಹಾದು ಇಚ್ಚಾಪುರಂನಲ್ಲಿ ಮುಕ್ತಾಯವಾಗಲಿದೆ. ಆರು ತಿಂಗಳ ಅವಧಿಗೆ ಈ ಪಾದಯಾತ್ರೆ ಸಾಗಲಿದೆ’ ಎಂದು ಜಗನ್ ಹೇಳಿದ್ದಾರೆ.
ಪಾದಯಾತ್ರೆ ಕುರಿತು ಮಂಗಳವಾರ ಹತ್ತನೇ ಯುವಭೇರಿ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.
ಜಗನ್ ಟೀಕೆಗೆ ಇದೇ ವೇಳೆ ಅಮರಾವತಿಯಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ‘ರಾಜ್ಯ ಸರ್ಕಾರವನ್ನು ದೂರುವ ಮೊದಲು ವಿರೋಧ ಪಕ್ಷದ ನಾಯಕರು ತಮ್ಮ ಸಂಸದರಿಗೆ ರಾಜೀನಾಮೆ ನೀಡಲು ಹೇಳಬೇಕು. ಅಕ್ರಮ ಆಸ್ತಿ ಪ್ರಕರಣದಲ್ಲಿ ತಮ್ಮ ಬಂಧನ ಸಮೀಪಿಸುತ್ತಿದೆ ಎಂದು ಭೀತಿಗೊಂಡಿದ್ದಾರೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.