ನವದೆಹಲಿ (ಪಿಟಿಐ): ಭಾರತದ ವಿವಿಧ ರಾಜಕೀಯ ಪಕ್ಷಗಳಿಗೆ ನೀಡುತ್ತಿದ್ದ ಕೋಟ್ಯಂತರ ರೂಪಾಯಿ ದೇಣಿಗೆಯನ್ನು ವೇದಾಂತ ಗಣಿ ಕಂಪೆನಿ ಕಳೆದ ವರ್ಷ ಅರ್ಧದಷ್ಟು ಕಡಿತಗೊಳಿಸಿದ ವಿಷಯ ಕಂಪೆನಿಯ ವಾರ್ಷಿಕ ವರದಿಯಿಂದ ಬಹಿರಂಗವಾಗಿದೆ.
2011–12ರಲ್ಲಿ ಸಮಾರು ₨12 ಕೊಟಿ ದೇಣಿಗೆ ನೀಡಿದ್ದ ಭಾರತ ಮೂಲದ ಅನಿಲ್ ಅಗರವಾಲ್ ಅವರ ವೇದಾಂತ ಕಂಪೆನಿ, 2012–13ರಲ್ಲಿ ಆ ಮೊತ್ತವನ್ನು ₨5 ಕೋಟಿಗೆ ಇಳಿಸಿದೆ. ಕಂಪೆನಿಯ ವಾರ್ಷಿಕ ವರದಿಯಲ್ಲಿ ದೊರೆತ ಅಂಕಿ, ಸಂಖ್ಯೆಗಳು ಈ ವಿಷಯವನ್ನು ಬಹಿರಂಗಪಡಿಸಿದ್ದು, ಲಾಭ ಪಡೆದ ರಾಜಕೀಯ ಪಕ್ಷಗಳ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ.
‘ಭಾರತದ ರಾಜಕೀಯ ಬೆಳವಣಿಗೆಗೆ ಪ್ರೋತ್ಸಾಹಿಸುವುದು ಪ್ರಜಾಪ್ರಭುತದ ಆಶಯಗಳನ್ನು ಬಲಪಡಿಸಿದಂತೆ’ ಎಂದು ಕಂಪೆನಿಯ ಆಡಳಿತ ಮಂಡಳಿ ಅಭಿಪ್ರಾಯಪಟ್ಟಿದೆ. ವೇದಾಂತ ಅಂಗ ಸಂಸ್ಥೆ ‘ಸೇಸಾ ಗೋವಾ’ 2012–13ರಲ್ಲಿ ಬಿಜೆಪಿಗೆ ₨ 30 ಲಕ್ಷ ಹಾಗೂ ಮತ್ತೊಂದು ಉಪ ಸಂಸ್ಥೆ ಸ್ಟೆರ್ಲೈಟ್ ಇಂಡಸ್ಟ್ರೀಜ್ ಎಲ್ಲ ರಾಜಕೀಯ ಪಕ್ಷಗಳಿಗೆ ಒಟ್ಟಾಗಿ ₨ 5ಕೋಟಿ ದೇಣಿಗೆ ನೀಡಿದೆ.
2011–12ರಲ್ಲಿ ರಾಜಕೀಯ ಪಕ್ಷಗಳಿಗೆ ₨ 4.56 ಕೋಟಿ ದೇಣಿಗೆ ಸಂದಾಯ ಮಾಡಿದ್ದ ಸೇಸಾ ಗೋವಾ ಕಂಪೆನಿ, 2012–13ರಲ್ಲಿ ಕೇವಲ ₨ 30 ಲಕ್ಷ ನೀಡಿದೆ. ಗಣಿಗಾರಿಕೆ ಚಟುವಟಿಕೆಗಳ ಮೇಲೆ ನಿಷೇಧ ಹೇರಿದ ಕಾರಣ ಕಂಪೆನಿಯ ದೇಣಿಗೆಯ ಮೊತ್ತ ಕೋಟಿಯಿಂದ ಏಕಾಏಕಿ ಲಕ್ಷಕ್ಕೆ ಕುಸಿದಿದೆ.
ಕಳೆದ ಬಾರಿ ಲೋಕಸಭಾ ಚುನಾವಣೆ ಸೇರಿದಂತೆ 2009–10 ರಿಂದ 2011–12ರ ಅವಧಿಯಲ್ಲಿ ಈ ಕಂಪೆನಿ ರಾಜಕೀಯ ಪಕ್ಷಗಳಿಗೆ ಒಟ್ಟು ಸುಮಾರು ₨ 28 ಕೋಟಿ ದೇಣಿಗೆ ನೀಡಿದೆ. ಲಂಡನ್ ಷೇರು ಪೇಟೆ ಪಟ್ಟಿಯಲ್ಲಿ 2003ರಲ್ಲಿ ಸ್ಥಾನ ಪಡೆದ ನಂತರ ಇಲ್ಲಿಯವರೆಗೆ ಭಾರತದ ರಾಜಕೀಯ ಪಕ್ಷಗಳಿಗೆ ಒಟ್ಟು ₨48 ಕೋಟಿ ಸಂದಾಯ ಮಾಡಿರುವುದನ್ನು ಕಂಪೆನಿಯ ವಾರ್ಷಿಕ ವರದಿಯ ಅಂಕಿ, ಅಂಶಗಳು ಸಾಬೀತುಪಡಿಸುತ್ತವೆ.
‘ವೇದಾಂತ ಕಂಪೆನಿಯಿಂದ ದೇಣಿಗೆ ಪಡೆಯುವ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿ ವಿದೇಶಿ ದೇಣಿಗೆ ನಿಯಂತ್ರಣ ಕಾನೂನನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ’ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಹೇಳಿತ್ತು. ಈ ಪ್ರಕರಣ ಕುರಿತಂತೆ ಆರು ತಿಂಗಳ ಒಳಗಾಗಿ ಕ್ರಮ ಕೈಗೊಳ್ಳುವಂತೆಯೂ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸೂಚಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.