ADVERTISEMENT

ಪಟ್ಟು ಸಡಿಲಿಸಿದ ಹಜಾರೆ, ಪರಿಷ್ಕೃತ ಲೋಕಪಾಲ ಜಾರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 10:42 IST
Last Updated 14 ಡಿಸೆಂಬರ್ 2013, 10:42 IST
ಅಣ್ಣಾ ಹಜಾರೆ (ಸಂಗ್ರಹ ಚಿತ್ರ).
ಅಣ್ಣಾ ಹಜಾರೆ (ಸಂಗ್ರಹ ಚಿತ್ರ).   

ರಾಳೆಗಣ ಸಿದ್ಧಿ (ಮಹಾರಾಷ್ಟ್ರ)(ಪಿಟಿಐ): ಲೋಕಪಾಲ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಪಟ್ಟನ್ನು ಸಡಿಲಗೊಳಿಸಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ರಾಜ್ಯಸಭೆಯಲ್ಲಿ ಮಂಡಿಲಾಗಿರುವ ಪರಿಷ್ಕೃತ ಲೋಕಪಾಲ ಮಸೂದೆಯೊಂದಿಗೆ ಮುಂದೆ ಸಾಗುವಂತೆ ಶನಿವಾರ ಸಲಹೆ ಮಾಡಿದ್ದಾರೆ. ಬದಲಾವಣೆಗಳನ್ನು ಮುಂದೆ ತಂದುಕೊಳ್ಳಬಹುದು ಎಂದೂ ಅವರು ಹೇಳಿದ್ದಾರೆ.

'ಹಾಲಿ ಕರಡು ಲೋಕಪಾಲ ಮಸೂದೆಯೊಂದಿಗೆ ಮುಂದೆ ಸಾಗುವ ಮತ್ತು ಅದನ್ನು ಅಂಗೀಕರಿಸುವ ಸಮಯ ಬಂದಿದೆ. ಮಸೂದೆಯು  ಒಮ್ಮೆ ಸಾಂವಿಧಾನಿಕ ವಾಸ್ತವಿಕತೆಯಾದರೆ ಬಳಿಕ ತಿದ್ದುಪಡಿಗಳ ಮೂಲಕ ಅದನ್ನು ಸುಧಾರಿಸಬಹುದು' ಎಂದು ಹಜಾರೆ ಪಿಟಿಐ ಜೊತೆಗೆ ಮಾತನಾಡುತ್ತಾ ಹಜಾರೆ ಹೇಳಿದರು.

ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಹಜಾರೆ ಅವರು ಆರಂಭಿಸಿರುವ ಅನಿರ್ದಿಷ್ಟ ನಿರಶನ ಶನಿವಾರ ಐದನೇ ದಿನಕ್ಕೆ ಪ್ರವೇಶಿಸಿದೆ.

ಸರ್ಕಾರವು ಶುಕ್ರವಾರ ರಾಜ್ಯಸಭೆಯಲ್ಲಿ ಪರಿಷ್ಕೃತ ಲೋಕಪಾಲ ಮಸೂದೆಯನ್ನು ಮಂಡಿಸಿತ್ತು. ಆದರೆ ಯುಪಿಎ ಮೈತ್ರಿಕೂಟಕ್ಕೆ ಬಾಹ್ಯ ಬೆಂಬಲ ನೀಡಿರುವ ಸಮಾಜವಾದಿ ಪಕ್ಷ ಸೇರಿದಂತೆ ವಿವಿಧ ಪಕ್ಷಗಳು ಬೇರೆ ಬೇರೆ ವಿಷಯಗಳನ್ನು ಎತ್ತಿಕೊಂಡು ಕೋಲಾಹಲ ಉಂಟು ಮಾಡಿದ್ದರಿಂದ ಮಸೂದೆಯನ್ನು ಪರಿಶೀಲನೆಗೆ ಎತ್ತಿಕೊಳ್ಳಲು ಆಗಿರಲಿಲ್ಲ.

ಪರಿಷ್ಕೃತ ಲೋಕಪಾಲ ಮಸೂದೆಯು ರಾಜ್ಯಗಳಲ್ಲಿ ಲೋಕಾಯುಕ್ತ ಸಂಸ್ಥೆಗಳ ರಚನೆಯ ವಿಚಾರವನ್ನು ಪ್ರತ್ಯೇಕಿಸುವುದರ ಜೊತೆಗೆ ಸರ್ಕಾರಿ ನೌಕರರ ವಿಚಾರಣಾ ಅಧಿಕಾರವನ್ನು ಸಾರ್ವಜನಿಕ ವಿಚಾರಣಾಧಿಕಾರಿಗೆ ವರ್ಗಾಯಿಸಲು ಅವಕಾಶ ಕಲ್ಪಿಸಿದೆ.

ಇದೇ ವರ್ಷ ಜನವರಿ 31ರಂದು ಸರ್ಕಾರವು ಲೋಕಪಾಲ ಮಸೂದೆಗೆ ಉಲ್ಲೇಖಿತ ತಿದ್ದುಪಡಿಗಳನ್ನು ಮಾಡಿತ್ತು.
ರಾಜ್ಯಸಭಾ ಆಯ್ಕೆ ಸಮಿತಿಯು ಶಿಫಾರಸು ಮಾಡಿದ್ದ 16 ಸಲಹೆಗಳ ಪೈಕಿ 14 ಸಲಹೆಗಳನ್ನು ಕೇಂದ್ರ ಸಂಪುಟ ಅಂಗೀಕರಿಸಿತ್ತು.

ರಾಜಕೀಯ ಪಕ್ಷಗಳ ಮಧ್ಯೆ ತೀವ್ರ ಭಿನ್ನಾಭಿಪ್ರಾಯ ಉಂಟಾದ ಪರಿಣಾಮವಾಗಿ 2011ರ ಡಿಸೆಂಬರ್ ನಿಂದ ಲೋಕಸಭೆಯಲ್ಲಿ ಮಸೂದೆ ನೆನೆಗುದಿಗೆ ಬಿದ್ದ ಬಳಿಕ ಕಳೆ ವರ್ಷ ಮೇ ತಿಂಗಳಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT