ಲಖನೌ: ಅಶೋಕ್ ಶುಕ್ಲಾ ಎನ್ನುವ ವ್ಯಕ್ತಿ ತನ್ನ ಪತ್ನಿಯನ್ನು ಚಾವಣಿಗೆ ನೇತುಹಾಕಿ ಹಲ್ಲೆ ನಡೆಸಿ, ಈ ಇಡೀ ದೃಶ್ಯವನ್ನು ವಿಡಿಯೊ ಮಾಡಿ ಪತ್ನಿಯ ಸೋದರನಿಗೆ ಕಳುಹಿಸಿದ್ದಾನೆ.
ವರದಕ್ಷಿಣೆಗಾಗಿ ಪೀಡಿಸಿ ಆತ ಈ ರೀತಿ ಮಾಡಿದ್ದು, ವರದಕ್ಷಿಣೆ ತಡೆ ಕಾಯ್ದೆ ಅಡಿಯಲ್ಲಿ ಶುಕ್ಲಾ ಹಾಗೂ ಆತನ ಕುಟುಂಬ ಸದಸ್ಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಷಹಜಹಾನ್ಪುರದ ಈ ಸಂತ್ರಸ್ತ ಮಹಿಳೆಗೆ ಏಳು ವರ್ಷದ ಹಿಂದೆ ಶುಕ್ಲಾ ಜತೆ ವಿವಾಹವಾಗಿತ್ತು. ಕೆಲವು ದಿನಗಳ ಹಿಂದೆ ಮಗ ಹುಟ್ಟಿದ್ದಕ್ಕಾಗಿ ಅದ್ದೂರಿ ಸಮಾರಂಭ ಏರ್ಪಡಿಸಿದ್ದ ಶುಕ್ಲಾ ಬಳಿಕ, ಸಮಾರಂಭದ ವೆಚ್ಚ ಭರಿಸುವಂತೆ ಪತ್ನಿಯ ಪೋಷಕರನ್ನು ಕೇಳಿದ್ದ.
ಆದರೆ ಅವರು ಅಸಹಾಯಕತೆ ವ್ಯಕ್ತಪಡಿಸಿದ್ದರಿಂದ, ಆಕ್ರೋಶಗೊಂಡ ಈತ ಭಾನುವಾರ ಪತ್ನಿಯನ್ನು ಚಾವಣಿಗೆ ನೇತುಹಾಕಿ ಹಲ್ಲೆ ನಡೆಸಿ ವಿಡಿಯೊ ಮಾಡಿದ್ದಾನೆ. ಬಳಿಕ ಈ ವಿಡಿಯೊವನ್ನು, ಪತ್ನಿಯ ಸೋದರ ಸದಸ್ಯನಾಗಿರುವ ವಾಟ್ಸ್ಆ್ಯಪ್ ಗ್ರೂಪ್ಗೆ ಕಳುಹಿಸಿ ತಕ್ಷಣವೇ ಹಣ ನೀಡುವಂತೆ ಸಂದೇಶ ಕಳುಹಿಸಿದ್ದ.
ಮಗಳ ಜೀವ ಅಪಾಯದಲ್ಲಿರಬಹುದು ಎಂದು ಆತಂಕಗೊಂಡ ಪೋಷಕರು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಮಹಿಳೆಯನ್ನು ರಕ್ಷಿಸಿರುವ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಗೆ ಕೈ, ಕಾಲು ಹಾಗೂ ಬೆನ್ನಿಗೆ ಗಂಭೀರ ಗಾಯಗಳಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.