ತಿರುವನಂತಪುರ (ಪಿಟಿಐ): ಇಲ್ಲಿನ ಪದ್ಮನಾಭಸ್ವಾಮಿ ದೇವಸ್ಥಾನದ ರಹಸ್ಯ ನೆಲಮಾಳಿಗೆಗಳಲ್ಲಿ ಶೋಧಿಸಲಾಗಿರುವ ಅಷ್ಟೈಶ್ವರ್ಯ ಸಾರ್ವಜನಿಕರ ಸ್ವತ್ತು ಎಂಬ ಸಿಪಿಎಂ ಅಭಿಪ್ರಾಯಕ್ಕೆ ರಾಜ್ಯದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
`ಈ ಸಂಪತ್ತು ದೇವಸ್ಥಾನಕ್ಕೇ ಸೇರಿದ್ದು ಎನ್ನುವುದು ನನ್ನ ಅಭಿಪ್ರಾಯ~ ಎಂದು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ದೇವಸ್ಥಾನದ ವ್ಯವಹಾರಗಳನ್ನು ತಿರುವಾಂಕೂರು ರಾಜಮನೆತನದ ಸುಪರ್ದಿಯಿಂದ ಮುಕ್ತಗೊಳಿಸಿ ಗುರುವಾಯೂರು ದೇವಸ್ಥಾನ ನಿರ್ವಹಣಾ ಸಮಿತಿಯಂಥ ಮಂಡಳಿಯನ್ನು ರಚಿಸಿ ಅದಕ್ಕೆ ಒಪ್ಪಿಸಬೇಕು ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ವಿಜಯನ್ ಅವರು ನೀಡಿದ್ದ ಸಲಹೆಯನ್ನೂ ಅವರು ತಿರಸ್ಕರಿಸಿದ್ದಾರೆ.
ಅದೇನೆ ಇರಲಿ, ಈ ಎಲ್ಲ ವಿಷಯಗಳಲ್ಲಿಯೂ ಸುಪ್ರೀಂಕೋರ್ಟ್ ನಿರ್ಧಾರವೇ ಅಂತಿಮ ಎಂದು ಚಾಂಡಿ ಸ್ಪಷ್ಟಪಡಿಸಿದ್ದಾರೆ.
ಕೇರಳದ ಕೆಲವು ಹಿಂದೂ ಸಂಘಟನೆಗಳು ಸಹ ಸಿಪಿಎಂ ಹೇಳಿಕೆಯನ್ನು ಖಂಡಿಸಿವೆ. `ದೇವಸ್ಥಾನದ ಸಂಪತ್ತು ದೇವಸ್ಥಾನಕ್ಕೇ ಸೇರಿದ್ದು. ವಿಜಯನ್ ಅವರ ಹೇಳಿಕೆಯಿಂದ ಭಕ್ತರ ನಂಬಿಕೆಗೆ ಅಗೌರವ ತೋರಿಸಿದಂತೆ ಆಗಿದೆ~ ಎಂದು ಮುಖಂಡ ಕುಮ್ಮನಂ ರಾಜಶೇಖರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.