ನವದೆಹಲಿ(ಪಿಟಿಐ): ಕಂಪೆನಿ ವ್ಯವಹಾರ ಸಚಿವ ಎಂ. ವೀರಪ್ಪ ಮೊಯಿಲಿ ಅವರು ಮಂಗಳವಾರ ಹೆಚ್ಚುವರಿಯಾಗಿ ಪರಿಸರ ಮತ್ತು ಅರಣ್ಯ ಖಾತೆ ವಹಿಸಿಕೊಂಡಿದ್ದು, ಇಲಾಖೆಯಲ್ಲಿ ಯಾವುದೇ ಕಡತಗಳನ್ನು ಬಾಕಿ ಉಳಿಸುವುದಿಲ್ಲ ಎಂದು ಹೇಳಿದರು.
ಜಯಂತಿ ನಟರಾಜನ್ ಅವರ ರಾಜೀನಾಮೆಯಿಂದ ಈ ಸ್ಥಾನ ತೆರವಾಗಿತ್ತು. ನವದೆಹಲಿಯಲ್ಲಿ ಹೆಚ್ಚುವರಿ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮೊಯಿಲಿ, ಹೆಚ್ಚುವರಿ ಖಾತೆಯಿಂದ ಹೊರೆಯೇನೂ ಆಗಿಲ್ಲ. ಬಾಕಿ ಉಳಿದಿರುವ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಲಾಗುವುದು. ಅಂದಂದಿನ ಕಡತಗಳನ್ನು ಸಂಜೆಯೊಳಗೆ ವಿಲೇ ಮಾಡುವುದು ನನ್ನ ಕ್ರಮ. ಉಳಿಸಿಕೊಳ್ಳುವುದು ಪುನಃ ಪರಿಶೀಲಿಸುವ ಆವಶ್ಯಕತೆ ಇದ್ದರೆ ಮಾತ್ರ' ಎಂದು ಹೇಳಿದರು.
ಯೋಜನೆಗಳಿಗೆ ಅನುಮತಿ ನೀಡುವ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗೆ ಧಕ್ಕೆ ತರುವ ಯಾವುದೇ ವಿಚಾರದಲ್ಲಿ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ. ಪರಿಸರಕ್ಕೆ ಹಾನಿ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಯೋಜನೆಗಳಿಗೆ ಪರಿಸರ ಅನುಮತಿ ತಡೆಹಿಡಿದಿದ್ದ ಪರಿಸರ ಸಚಿವಾಲಯದ ಬಗ್ಗೆ ಉದ್ಯಮ ವಲಯದಿಂದ ದೂರುಗಳು ಕೇಳಿ ಬಂದಿದ್ದವು. ಈ ಕಾರಣಕ್ಕಾಗಿ ಜಯಂತಿ ಅವರ ರಾಜೀನಾಮೆ ಪಡೆಯಲಾಗಿದೆ ಎಂದು ಆಪಾದನೆಗಳೂ ಬಂದಿದ್ದವು.
ಮುಂಬರುವ ಲೋಕಸಭೆ ಚುನಾವಣೆಗಾಗಿ ಪಕ್ಷ ಸಂಘಟನೆ ಮತ್ತು ಬಲವರ್ಧನೆ ಉದ್ದೇಶದಿಂದಲೇ ರಾಜೀನಾಮೆ ನೀಡಿರುವುದಾಗಿ ಜಯಂತಿ ನಟರಾಜನ್ ಪ್ರತಿಪಾದಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.